ಸೋಮವಾರ ಡಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದ ನಂತರ ಶ್ರೀಲಂಕಾ ಎ ತಂಡದ ಆಟಗಾರನೊಂದಿಗೆ ಭಾರತ ಎ ತಂಡದ ವೈಭವ್ ಸೂರ್ಯವಂಶಿ ಮೈದಾನದಲ್ಲಿಯೇ ಸಂಘರ್ಷಕ್ಕೆಇಳಿದಿದ್ದು, ವ್ಯಾಪಕವಾಗಿ ಸುದ್ದಿಯಾಗಿತ್ತು. ಭಾರತ ಎ ತಂಡವು ಸೂಪರ್ ಓವರ್ನಲ್ಲಿ ಸೋತ ನಂತರ ಈ ಘಟನೆ ಸಂಭವಿಸಿದ್ದು, ಅಫ್ಘಾನಿಸ್ತಾನವನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡ ಸತತ ಎರಡನೇ ಸೋಲು ಕಂಡಿದೆ.
ಸೂಪರ್ ಓವರ್ನಲ್ಲಿ 17 ರನ್ಗಳನ್ನು ಬೆನ್ನಟ್ಟಿದ ಭಾರತ ಎ ತಂಡವು ಕೇವಲ ಒಂಬತ್ತು ರನ್ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಸೂರ್ಯವಂಶಿ ಓವರ್ನ ಕೊನೆಯ ಮೂರು ಎಸೆತಗಳನ್ನು ಎದುರಿಸಿದರು. ತಮ್ಮ ಬ್ಯಾಟಿಂಗ್ ಪಾಲುದಾರ ಸೂರ್ಯಾಂಶ್ ಶೆಡ್ಜ್ ಅವರೊಂದಿಗೆ ಹಿಂತಿರುಗುತ್ತಿದ್ದಾಗ, ಅತಿರೇಖದ ಸಂಭ್ರಮಾಚರಣೆ ಮಾಡುತ್ತಿದ್ದ ಶ್ರೀಲಂಕಾ ಆಟಗಾರರ ಜೊತೆ ವೈಭವ್ ಸೂರ್ಯವಂಶಿ ವಾಗ್ವಾದಕ್ಕೆ ಇಳಿದರು.
ಈ ವೇಳೆ ಸೂರ್ಯವಂಶಿ ಒಬ್ಬ ಆಟಗಾರನನ್ನು ತಳ್ಳಿದರು ಮತ್ತು ಮೈದಾನದಲ್ಲಿದ್ದ ಇತರ ಶ್ರೀಲಂಕಾ ಕ್ರಿಕೆಟಿಗರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಐಸಿಸಿ ಕೈಪಿಡಿಯಲ್ಲಿ ದೈಹಿಕ ವಾಗ್ವಾದಗಳಿಗೆ ಕಟ್ಟುನಿಟ್ಟಾದ ನಿಷೇಧವಿರುವುದರಿಂದ, ಶ್ರೀಲಂಕಾ ಆಟಗಾರರೊಂದಿಗಿನ ಅವರ ವಾಗ್ವಾದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂರ್ಯವಂಶಿಗೆ ಛೀಮಾರಿ ಹಾಕಬಹುದು ಎಂಬ ಊಹಾಪೋಹಗಳಿವೆ. ಸ್ಪೋರ್ಟ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಂತಹ ಯಾವುದೇ ಕ್ರಮವನ್ನು ನಿರಾಕರಿಸಿದ್ದಾರೆ.
'ನಮ್ಮ ಆಟಗಾರರು ಪಂದ್ಯಾವಳಿಯತ್ತ ಗಮನಹರಿಸಲು ನಾವು ಅವಕಾಶ ನೀಡುತ್ತೇವೆ ಮತ್ತು ಯಾವುದೇ ಇತರ ಸಮಸ್ಯೆಗಳಿಂದ ಅವರು ವಿಚಲಿತರಾಗಬಾರದು' ಎಂದು ಸೈಕಿಯಾ ಹೇಳಿದರು.
ಈ ಮಧ್ಯೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಐಪಿಎಲ್ 2026ರ ನಂತರ ತ್ರಿಕೋನ ಸರಣಿಯಲ್ಲಿ ತನ್ನ ಅದ್ಭುತ ಫಾರ್ಮ್ ಅನ್ನು ಮುಂದುವರಿಸುವ ನಿರೀಕ್ಷೆಯಿತ್ತು. ಆದರೆ ಸೂರ್ಯವಂಶಿ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಸದ್ಯ ಆಡಿರುವ ಪಂದ್ಯಗಳಲ್ಲಿ 14, 44 ಮತ್ತು 21 ರನ್ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.