ಭೋಪಾಲ್: ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯವರ ಮೇಲೆ ಹಲ್ಲೆ, ನಿಂದನೆ ಮತ್ತು ಬಲವಂತವಾಗಿ ಅವರ ಮೊಬೈಲ್ ಫೋನ್ ಕಿತ್ತುಕೊಂಡ ಆರೋಪದ ಮೇಲೆ ಪಂಜಾಬ್ ಕಿಂಗ್ಸ್ (PBKS) ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್ ಮತ್ತು ಅವರ ತಂದೆ ಶೈಲೇಶ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭೋಪಾಲ್ನ ರಾತಿಬಾದ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಎಫ್ಐಆರ್ನಲ್ಲಿ ಶೈಲೇಶ್ ಸಿಂಗ್, ಶಶಾಂಕ್ ಸಿಂಗ್ ಮತ್ತು ಮಿಶ್ರಾ ಎಂದು ಗುರುತಿಸಲಾದ ಅವರ ಚಾಲಕನನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 296(ಬಿ), 115(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ರೇವಾ ಜಿಲ್ಲೆಯ ನಿವಾಸಿ ವಿಪೇಂದ್ರ ಸಿಂಗ್ ತೋಮರ್ ಎನ್ನುವವರು ದೂರು ನೀಡಿದ್ದು, ಜೂನ್ 25 ರಂದು ಅವರು ನೀಲ್ಬಾದ್ನಲ್ಲಿರುವ ಕುಟುಂಬದ ಬಂಗಲೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿದ್ದರು. ಆಹಾರ ಮತ್ತು ವಸತಿಯೊಂದಿಗೆ ಮಾಸಿಕ ₹15,000 ಸಂಬಳ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
'ವೇತನ, ಊಟ ಮತ್ತು ವಸತಿಯ ಭರವಸೆ ಸಿಕ್ಕ ನಂತರ ನಾನು ಅಲ್ಲಿ ಕೆಲಸ ಮಾಡಲು ಒಪ್ಪಿಕೊಂಡೆ ಮತ್ತು ಅಲ್ಲಿನ ನಿವಾಸದಲ್ಲಿಯೇ ಉಳಿದುಕೊಂಡೆ. ನಂತರ ತಮ್ಮ ಕೆಲಸದಲ್ಲಿ ಲೋಪಗಳಿವೆ ಎಂದು ಹೇಳಿ ತಮ್ಮ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳಲಾಯಿತು' ಎಂದು ದೂರುದಾರರು ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
'ಜೂನ್ 28 ರಂದು ಉಪಹಾರ ತಯಾರಿಸಿದ ನಂತರ, ನಾನು ಶೈಲೇಶ್ ಸಿಂಗ್ ಅವರಲ್ಲಿ ನನ್ನ ಮೊಬೈಲ್ ಫೋನ್ ಹಿಂತಿರುಗಿಸುವಂತೆ ಕೇಳಿದೆ. ಆದರೆ ಅವರು ನಿರಾಕರಿಸಿದರು. ಇದರಿಂದ ಬೇಸರಗೊಂಡು ನಾನು ನನ್ನ ಕೋಣೆಗೆ ಹೋದೆ' ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
'ಶೈಲೇಶ್ ಸಿಂಗ್, ಅವರ ಮಗ ಶಶಾಂಕ್ ಸಿಂಗ್ ಮತ್ತು ಅವರ ಚಾಲಕ ನನ್ನ ಕೋಣೆಗೆ ಪ್ರವೇಶಿಸಿ, ನನ್ನನ್ನು ನಿಂದಿಸಿ, ಕೈ ಮತ್ತು ಮುಷ್ಟಿಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು. ನನ್ನನ್ನು ಹೊಡೆದ ನಂತರ, ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದರು' ಎಂದು ಆರೋಪಿಸಿದ್ದಾರೆ.
'ಆಹಾರ ಮತ್ತು ವಸತಿ ವೆಚ್ಚಕ್ಕಾಗಿ ಎಂದು ಹೇಳಿಕೊಂಡು ತನ್ನ ಮೊಬೈಲ್ ಫೋನ್ನಿಂದ ₹1,000 ಗಳನ್ನು ವರ್ಗಾಯಿಸಿದ್ದಾರೆ. ಘಟನೆಯ ನಂತರ, ನಾನು ನನ್ನ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಬಂದೆ' ಎಂದು ತೋಮರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಶಾಂಕ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಅವರ ತಂದೆ ಶೈಲೇಶ್ ಸಿಂಗ್ ಮಧ್ಯಪ್ರದೇಶದಲ್ಲಿ ನಿವೃತ್ತ ವಿಶೇಷ ಡಿಜಿ ಆಫ್ ಪೊಲೀಸ್ ಆಗಿದ್ದಾರೆ.
ಪೊಲೀಸರು ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಭೋಪಾಲ್ನ ನೀಲ್ಬಾದ್ ಪ್ರದೇಶದ ಡಿಪಿಎಸ್ ಸ್ಕ್ವೇರ್ ಬಳಿಯ ಮೆಂಡೋರಿ ರಸ್ತೆಯಲ್ಲಿರುವ ತಮ್ಮ ಬಂಗಲೆಯಲ್ಲಿ ವಾಸಿಸುವ ನಿವೃತ್ತ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ಅವರಿಂದಲೂ ಪ್ರತಿಕ್ರಿಯೆ ಪಡೆಯಲು ಐಎಎನ್ಎಸ್ ಪ್ರಯತ್ನಿಸಿದೆ; ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಹೇಳಿಕೆ ಬಂದಿಲ್ಲ.