ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಬೇಕು ಎಂದು ಮತ್ತೆ ನಟ-ಹೋರಾಟಗಾರ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಚೇತನ್ ಅಹಿಂಸಾ, 'ಮೀಸಲಾತಿನೇ ಮೆರಿಟ್, ಮೀಸಲಾತಿನೇ ಟ್ಯಾಲೆಂಟ್! ನಮಗೂ ಅವಕಾಶ ಕೊಡಿ, ಅಸಾಧಾರಣ ಪ್ರತಿಭೆಗಳನ್ನು ನೋಡಿ. ಎಲ್ಲರಿಗೂ ಚಾನ್ಸ್ ಸಿಕ್ಕರೆ ಕ್ರಿಕೆಟ್ ಟೀಮ್ಗೆ ಇನ್ನೂ ಒಳ್ಳೆಯದಾಗುತ್ತದೆ' ಎಂದು ಹೇಳಿದ್ದಾರೆ.
'ಕ್ರಿಕೆಟ್ ನಲ್ಲಿ ಮೀಸಲಾತಿ ಬಹಳ ಅಗತ್ಯವಿದೆ. ಅದೇ ಪ್ರತಿಭೆ.. ಮೀಸಲಾತಿ ಪ್ರತಿಭೆಗೆ ಕಡಿವಾಣ ಹಾಕುತ್ತದೆ ಎಂಬದು ಭ್ರಮೆ.. ಅದು ಬಹುಸಂಖ್ಯಾತರ ತಾರತಮ್ಯದ ಮನಃಸ್ಥಿತಿ. ಮೀಸಲಾತಿನೇ ಮೆರಿಟ್, ಮೀಸಲಾತಿನೇ ಟ್ಯಾಲೆಂಟ್!.. 90 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ 300 ಜನ ಆಟಗಾರರು ಬಂದುಹೋಗಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ಪೈಕಿ 70ರಿಂದ 80 ಜನ ಎಸ್ಇ-ಎಸ್ ಟಿ ಸಮುದಾಯದವರು ಇರಬೇಕಿತ್ತು. ಆದರೆ ದುರಾದೃಷ್ಟವಶಾತ್ ಕೇವಲ 4 ಜನ ಮಾತ್ರ ಬಂದು ಹೋಗಿದ್ದಾರೆ ಎಂದು ಚೇತನ್ ಹೇಳಿದ್ದಾರೆ.
ಅಂತೆಯೇ, 'ನಮ್ಮ ಹುಡುಗರಿಗೆ ಕ್ರಿಕೆಟ್ ಬರುವುದಿಲ್ಲ.. ನಾಯಕತ್ವದಲ್ಲಿ ಎಲ್ಲರನ್ನೂ ಮೀರಿಸುತ್ತಾರೆ. ನಮಗೆ ಚಾನ್ಸ್ ಕೊಡಿ ಅಷ್ಟೇ.. ಮೀಸಲಾತಿ ಆರಂಭವಾದಾಗ ಜ್ಯೋತಿಬಾ ಫುಲೆ ಬಂದಾಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಅಧಿಕಾರಿಗಳ ಕಚೇರಿಗಳಲ್ಲಿ, ಎಲ್ಲ ವಿವಿಗಳಲ್ಲಿ, ಎಲ್ಲ ಶೈಕ್ಷಣಿಕ ಕೇಂದ್ರಗಳಲ್ಲಿ ಬ್ರಾಹ್ಮಣ ಗಂಡಸರು ಮಾತ್ರ ಇದ್ದರು. ಅವರಿದ್ದರೆ ಅವರು ಮಾತ್ರ ಪ್ರತಿಭಾವಂತರಾ? ಅವರು ಮಾತ್ರ ಬುದ್ದಿವಂತರಾ?.. ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಬಂದಾಗ ಎಲ್ಲರಿಗೂ ಅವಕಾಶ ದೊರೆಯಿತು. ಅಂತೆಯೇ ಕ್ರಿಕೆಟ್ ನಲ್ಲೂ ಎಲ್ಲರಿಗೂ ಅವಕಾಶ ನೀಡಿದರೆ ಇನ್ನೂ ಪ್ರತಿಭಾವಂತ ಆಟಗಾರರು ಬರುತ್ತಾರೆ. ಹೀಗಾಗಿ ಕ್ರಿಕೆಟ್ ನಲ್ಲಿ ಮೀಸಲಾತಿ ಬಹಳ ಅಗತ್ಯವಿದೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.