ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಶುಕ್ರವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾಮೆಂಟರಿ ಪ್ಯಾನೆಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಶಿವರಾಮಕೃಷ್ಣನ್ ತಮ್ಮ ನಿರ್ಧಾರದ ಹಿಂದೆ ಅವಕಾಶಗಳ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿದ್ದಾರೆ.
ಪಂದ್ಯದ ವೇಳೆ ಟಾಸ್ ಪ್ರಕ್ರಿಯೆ ಅಥವಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನನಗೆ ಅವಕಾಶ ನೀಡುತ್ತಿರಲಿಲ್ಲ. ಇದರ ಹಿಂದೆ ವರ್ಣ ಬೇಧ ನೀತಿಯ ಕಾರಣವಿದೆ ಎಂಬ ಹೇಳಿಕೆ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಲೆಜೆಂಡರಿ ಸ್ಪಿನ್ನರ್ ಆರ್. ಅಶ್ವಿನ್ ಕೂಡಾ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡದ್ದು, BCCI ಕಾಮೆಂಟರಿ ಪ್ಯಾನಲ್ ನಿಂದ ನಿವೃತ್ತನಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಬಿಸಿಸಿಐನ ಹೊಸಬರು ತನ್ನ ಅವಕಾಶಗಳನ್ನು ಕಸಿದುಕೊಂಡಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
"ನನ್ನನ್ನು 23 ವರ್ಷಗಳಿಂದ ಟಾಸ್ ಮತ್ತು ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಬಳಸದಿದ್ದರೆ ರವಿಶಾಸ್ತ್ರಿ ಕೋಚ್ ಆದಾಗಲೂ ಪಿಚ್ ರಿಪೋರ್ಟ್, ಟಾಸ್, ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೊಸಬರು ಬಂದರೆ ಕಾರಣ ಏನಿರಬಹುದು ಎಂದು ನೀವು ಯೋಚಿಸುತ್ತೀರಾ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಭಾರತದ ಮಾಜಿ ಲೆಗ್ ಸ್ಪಿನ್ನರ್ ಆಗಿರುವ ಶಿವರಾಮಕೃಷ್ಣನ್ 1980ರಲ್ಲಿ ಭಾರತದ ಪರ 9 ಟೆಸ್ಟ್ ಗಳನ್ನಾಡಿದ್ದು, 16 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದಕ್ಕೆ ಬಿಸಿಸಿಐನ ವರ್ಣ ತಾರತಮ್ಯ ಕಾರಣ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ನಿರ್ಧಾರದ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ಆರ್. ಅಶ್ವಿನ್, ಇದು ಐಪಿಎಲ್ ನಲ್ಲಿ ಯಾಕಿಲ್ಲ ("Oh no! Why not this IPL? ಎಂದು ಪ್ರಶ್ನಿಸಿದ್ದಾರೆ.
ಶಿವರಾಮಕೃಷ್ಣನ್ ಅವರು 2000 ರಲ್ಲಿ ತಮ್ಮ ಕಾಮೆಂಟರಿ ವೃತ್ತಿಜೀವನ ಆರಂಭಿಸಿದರು. ICC ಕ್ರಿಕೆಟ್ ಸಮಿತಿಯಲ್ಲಿ ಆಟಗಾರರ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 12 ವಿಕೆಟ್ ಗಳೊಂದಿಗೆ ಮ್ಯಾಚ್ ವಿನ್ನಿಂಗ್ ಗಾಗಿ ಅವರು ಪ್ರಸಿದ್ಧರಾಗಿದ್ದರು. ಸುನಿಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಮತ್ತು ಹೆಡ್ಜಸ್ ವಿಶ್ವ ಚಾಂಪಿಯನ್ಶಿಪ್ ಗೆಲುವಿನಲ್ಲಿ ಶಿವರಾಮಕೃಷ್ಣನ್ ಪ್ರಮುಖ ಕೊಡುಗೆ ನೀಡಿದ್ದರು.