14 ವರ್ಷದ ಬಾಲಕನಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ ಸಂದರ್ಭವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ನೆನಪಿಸಿಕೊಂಡಿದ್ದಾರೆ. ನೀನು ಮುಂದೊಂದು ದಿನ ಎಂಎಸ್ ಧೋನಿ ಆಗುತ್ತೀಯಾ ಎಂದು ತಾನು ಹೇಳಿದ್ದನ್ನು ಸ್ಮರಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಯಾರನ್ನೂ ಅನುಕರಿಸುವ ಅಗತ್ಯವಿಲ್ಲ, ಅವರೊಬ್ಬನೇ ಸಂಜು ಸ್ಯಾಮ್ಸನ್ ಆಗುತ್ತಾರೆ ಎಂದು ತನ್ನನ್ನು ತಿದ್ದಿದ್ದಾಗಿ ಶಶಿ ತರೂರ್ ಹೇಳಿದರು.
ಟಿ20 ವಿಶ್ವಕಪ್ನಲ್ಲಿ ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದರು. ನಾಕ್ಔಟ್ ಹಂತದಲ್ಲಿ ತಂಡಕ್ಕೆ ಸೇರಿಕೊಂಡು ಮೂರು ಸತತ ಅರ್ಧಶತಕಗಳನ್ನು ಗಳಿಸಿದರು. ಐದು ಪಂದ್ಯಗಳಲ್ಲಿ 321 ರನ್ ಗಳಿಸಿದ ಅವರು ‘ಟೂರ್ನಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಗೂ ಪಾತ್ರರಾದರು.
ಈ ಬಗ್ಗೆ ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಶಶಿ ತರೂರ್, ಸಂಜು ಸ್ಯಾಮ್ಸನ್ 14 ವರ್ಷದವನಾಗಿದ್ದಾಗ ನಾನು ಭೇಟಿ ಮಾಡಿದ್ದೆ. ಆಗ ನೀನು ಚೆನ್ನಾಗಿ ಆಡ್ತೀಯಾ, ನಿನ್ನಲ್ಲಿ ಪ್ರತಿಭೆ ಇದೆ, ಮುಂದೊಂದು ದಿನ ಮಹೇಂದ್ರ ಸಿಂಗ್ ಧೋನಿ ತರ ಆಗುತ್ತೀಯಾ ಎಂದು ಉತ್ತೇಜನ ನೀಡಿ ಕಳಿಸಿದ್ದೆ. ಆದರೆ ನಂತರ ಗೌತಮ್ ಗಂಭೀರ್ ಹೇಳಿದರು—ಸಂಜು ಸ್ಯಾಮ್ಸನ್ ಯಾರನ್ನೂ ಅನುಸರಿಸುವುದಿಲ್ಲ, ಅವರಿಗೆ ಯಾರೂ ಸಾಟಿ ಇಲ್ಲ, ಅವರೊಬ್ಬರೇ ಸಂಜು ಸ್ಯಾಮ್ಸನ್ ಆಗುತ್ತಾರೆ. ಅದು ಇಂದು ನಿಜವಾಗಿದೆ ಎಂದರು.
ಸ್ಯಾಮ್ಸನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಶಿ ತರೂರ್, ಅವರು ಏಕದಿನ ತಂಡದಲ್ಲಿ ಮತ್ತೆ ಅವಕಾಶ ಪಡೆಯಬೇಕು ಎಂದು ಹೇಳಿದರು.
ಅವರು ಮನಸ್ಸನ್ನು ಕೇಂದ್ರೀಕೃತವಾಗಿಟ್ಟುಕೊಂಡು, ಶಾಂತ ಮತ್ತು ಸಮತೋಲನದಿಂದ ಆಡಿದರು. ಅವರ ಆಟ ನೋಡೋದು ಒಂದು ಕಾವ್ಯದಂತೆ ಇತ್ತು. ಏಕದಿನ ಪಂದ್ಯದಲ್ಲಿ ಅವರ ಕೊನೆಯ ಇನ್ನಿಂಗ್ಸ್ ಶತಕವಾಗಿತ್ತು, ಆದರೂ ಅವರನ್ನು ಕೈಬಿಟ್ಟರು. ಈಗ ಮತ್ತೆ ಅವಕಾಶ ನೀಡಬೇಕು ಎಂದು ಹೇಳಿದರು.
ಐಪಿಎಲ್ 2026 ಸೀಸನ್ಗೂ ಮುನ್ನ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತರಬೇತಿ ತಂಡಕ್ಕೆ ಸೇರಿಕೊಂಡಿದ್ದು, ಮೊದಲ ಬಾರಿಗೆ ಎಂಎಸ್ ಧೋನಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ನಿನ್ನೆ ತಂಡಕ್ಕೆ ಸೇರಿದ ನಂತರ ಅವರು ಧೋನಿ ಜೊತೆ ಹಾಸ್ಯಭರಿತ ಮಾತುಕತೆ ನಡೆಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.