ಶನಿವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಇಶಾನ್ ಕಿಶನ್ ಅವರಿಗೆ ಸಹ ಆಟಗಾರ ಜೀಶನ್ ಅನ್ಸಾರಿ ಪೆವಿಲಿಯನ್ ಕಡೆಗೆ ತೆರಳುವಂತೆ ಮಾಡಿದ್ದಾರೆ. ಪಂದ್ಯದ ಎರಡನೇ ಇನಿಂಗ್ಸ್ನ 8ನೇ ಓವರ್ನಲ್ಲಿ 26 ವರ್ಷದ ಲೆಗ್ ಸ್ಪಿನ್ನರ್ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ಔಟ್ ಮಾಡಿದರು. ಇಶಾನ್ ಕಿಶನ್ ಸ್ಪಿನ್ನರ್ ವಿರುದ್ಧ ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಫಾರ್ಮ್ನಲ್ಲಿದ್ದರು. ಆದಾಗ್ಯೂ, ಮುಂದಿನ ಎಸೆತದಲ್ಲಿ ಜೀಶನ್ ವಿಕೆಟ್ ಪಡೆದರು. ಕಿಶಾನ್ ಅವರು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಫೀಲ್ಡರ್ಗೆ ಸರಳ ಕ್ಯಾಚ್ ನೀಡಿದರು. ಕಿಶನ್ ಔಟ್ ಆದ ನಂತರವೇ ಬೌಲರ್ ಪೆವಿಲಿಯನ್ ಕಡೆಗೆ ಬೆರಳು ತೋರಿಸಿ ವಾಕ್ ಮಾಡಲು ಸನ್ನೆ ಮಾಡಿದರು. ಇದನ್ನು ಕಂಡ ಕಿಶನ್, ನಕ್ಕು ಮುನ್ನಡೆದರು.
ಇದಕ್ಕೂ ಮೊದಲು, ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026ರ ಆರಂಭದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮಧ್ಯಂತರ ನಾಯಕನನ್ನಾಗಿ ನೇಮಿಸಿದೆ. ಅಭಿಷೇಕ್ ಶರ್ಮಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಇದೀಗ ನಾಯಕರಾಗಿದ್ದ ಪ್ಯಾಟ್ ಕಮ್ಮಿನ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಕಮ್ಮಿನ್ಸ್ ಗಾಯದಿಂದ ಬಳಲುತ್ತಿದ್ದು, ಕಳೆದ ಆಶಸ್ ಸರಣಿಯ ಪ್ರಮುಖ ಭಾಗ ಹಾಗೂ ಟಿ20 ವಿಶ್ವಕಪ್ನಿಂದ ದೂರ ಉಳಿದಿದ್ದರು.
'ಪ್ಯಾಟ್ ಕಮ್ಮಿನ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಕೆಲವು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಅವರು ಚೇತರಿಸಿಕೊಳ್ಳುವವರೆಗೆ, ಇಶಾನ್ ಕಿಶನ್ ನಾಯಕರಾಗಿ ಮತ್ತು ಅಭಿಷೇಕ್ ಶರ್ಮಾ ಉಪನಾಯಕರಾಗಿರಲಿದ್ದಾರೆ' ಎಂದು ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಆದಾಗ್ಯೂ, ಐಪಿಎಲ್ 2016ರ ವಿಜೇತ ಎಸ್ಆರ್ಹೆಚ್, ಕಮ್ಮಿನ್ಸ್ ಎಷ್ಟು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಮಾದರಿಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ ನಂತರ ಎಸ್ಆರ್ಎಚ್ನ ತಾತ್ಕಾಲಿಕ ನಾಯಕನಾಗಿ ಕಿಶನ್ ನೇಮಕಗೊಂಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಎಡಗೈ ಬ್ಯಾಟ್ಸ್ಮನ್ ಪ್ರಮುಖ ಪಾತ್ರ ವಹಿಸಿದರು, ಒಂಬತ್ತು ಪಂದ್ಯಗಳಲ್ಲಿ 199.37 ಸರಾಸರಿಯಲ್ಲಿ 317 ರನ್ಗಳೊಂದಿಗೆ ಟೂರ್ನಮೆಂಟ್ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅವರು 80.25 ಸರಾಸರಿಯನ್ನು ಹೊಂದಿದ್ದರು ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದರು.
ಅವರ ಈ ಸಾಧನೆಯಿಂದಾಗಿ ಕಿಶನ್ ಐಸಿಸಿ ಟಿ20ಐ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ನಂ. 2 ಸ್ಥಾನಕ್ಕೆ ಏರಿದರು. ಈ ಪಟ್ಟಿಯಲ್ಲಿ ಅಭಿಷೇಕ್ ಮೊದಲ ಸ್ಥಾನದಲ್ಲಿದ್ದಾರೆ.
ಈ ಆವೃತ್ತಿಯ ಆರಂಭದಲ್ಲಿ, ಕಿಶನ್ ಜಾರ್ಖಂಡ್ ತಂಡವನ್ನು ಭಾರತದ ಪ್ರಮುಖ ದೇಶೀಯ ಟಿ20 ಸ್ಪರ್ಧೆಯಾದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವತ್ತ ಮುನ್ನಡೆಸಿದರು.