ಲಾಹೋರ್: ಇರಾನ್ ಯುದ್ಧ ಮತ್ತು ಐಪಿಎಲ್ ಆರ್ಭಟದ ನಡುವೆ ಮಂಕಾಗಿರುವ ಪಾಕಿಸ್ತಾನ ಪ್ರೀಮಿಯರ್ ಲೀಗ್ ಈ ವರ್ಷ 'ನಾಮ್ ಕೇ ವಾಸ್ತೆ' ಮಾತ್ರ ನಡೆಯುತ್ತಿದ್ದು, ಪಿಎಸ್ಎಲ್ ಬಿಟ್ಟು ಐಪಿಎಲ್ ಆಡುತ್ತಿರುವ ವಿದೇಶಿ ಆಟಗಾರರ ವಿರುದ್ಧ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕಠಿಣ ಕ್ರಮ ಕೈಗೊಳ್ಳುವ ಘೋಷಣೆ ಮಾಡಿದ್ದಾರೆ.
ಹೌದು.. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಜ್ಞೆ ಮಾಡಿದ್ದಾರೆ. ಏಕೆಂದರೆ ಪಿಎಸ್ ಎಲ್ ಮತ್ತು ಐಪಿಎಲ್ ಎರಡೂ ಲೀಗ್ಗಳು ಸತತ ಎರಡನೇ ವರ್ಷವೂ ಘರ್ಷಣೆ ಎದುರಿಸುತ್ತಿವೆ.
ಶ್ರೀಲಂಕಾದ ದಾಸುನ್ ಶನಕ ಅವರು ಲಾಹೋರ್ ಖಲಂದರ್ ತಂಡದಿಂದ ಹೊರಗುಳಿದು ರಾಜಸ್ಥಾನ ರಾಯಲ್ಸ್ಗೆ ಸೇರ್ಪಡೆಗೊಂಡಿದ್ದಾರೆ. ಶನಕ ಈ ಹಿಂದೆ 2023 ರ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು, ಅಲ್ಲಿ ಅವರು ಮೂರು ಪಂದ್ಯಗಳನ್ನು ಆಡಿದ್ದರು. ಮೂರು ಇನ್ನಿಂಗ್ಸ್ಗಳಲ್ಲಿ ಅವರು 26 ರನ್ ಗಳಿಸಿದ್ದರು. ಇಸ್ಲಾಮಾಬಾದ್ ಯುನೈಟೆಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಶನಕ ಐಪಿಎಲ್ ಗಾಗಿ ಪಿಎಸ್ ಎಲ್ ತೊರೆದು ಹೋಗಿದ್ದಾರೆ.
ಕಠಿಣ ಕ್ರಮ ಕೈಗೊಳ್ಳುತ್ತೇವೆ
ಇನ್ನು ವಿದೇಶಿ ಆಟಗಾರರು ಪದೇ ಪದೇ ಟೂರ್ನಿ ಬದಲಿಸುತ್ತಿರುವುದರಿಂದ ಜಾಗತಿಕ ಕ್ರಿಕೆಟ್ ನಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಿಸಿಬಿ ಇದೀಗ ಈ ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಮಾತನಾಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, 'ಆ ಆಟಗಾರರ ವಿರುದ್ಧ ನಿಯಮಗಳ ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ.
ಕಳೆದ ವರ್ಷವೂ ಒಂದು ಪ್ರಕರಣವಿತ್ತು [ಕಾರ್ಬಿನ್ ಬಾಷ್ ಪ್ರಕರಣ], ಮತ್ತು ಈ ಬಾರಿಯೂ ಅದೇ ರೀತಿ ಆಗುತ್ತಿದೆ. ಐಪಿಎಲ್ನೊಂದಿಗೆ ಘರ್ಷಣೆ ಒಂದು ಸಮಸ್ಯೆಯಲ್ಲ ಏಕೆಂದರೆ ಆಟಗಾರರು ಅಲ್ಲಿಗೆ ಹೋಗುತ್ತಿದ್ದರೆ, ನಮಗೆ ಅತ್ಯುತ್ತಮ ಆಟಗಾರರು ಇಲ್ಲಿಗೆ ಬರುತ್ತಿದ್ದಾರೆ. ವರ್ಷಪೂರ್ತಿ ನಮಗೆ ಬೇರೆ ಅವಕಾಶವಿಲ್ಲದ ಕಾರಣ ಪಿಎಸ್ಎಲ್ ಅನ್ನು ಮುಂದೂಡಲು ನಮಗೆ ಸಾಧ್ಯವಿಲ್ಲ" ಎಂದು ಹೇಳಿದರು.
ಕಾರ್ಬಿನ್ ಬಾಷ್ ಕಳೆದ ಬಾರಿ ಪೇಶಾವರ್ ಝಲ್ಮಿ ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಅವಕಾಶ ಸಿಗುತ್ತಲೇ ಅಂತಿಮ ಕ್ಷಣದಲ್ಲಿ ಪಿಎಸ್ಎಲ್ ತೊರೆದಿದ್ದರು. ಈ ವರ್ಷ ಗುಡಕೇಶ್ ಮೋಟೀ, ಜೇಕ್ ಫ್ರೇಸರ್-ಮೆಕ್ಗುರ್ಕ್, ಒಟ್ನೀಲ್ ಬಾರ್ಟ್ಮನ್ ಮತ್ತು ಸ್ಪೆನ್ಸರ್ ಜಾನ್ಸನ್ ಸೇರಿದಂತೆ ಹಲವಾರು ವಿದೇಶಿ ಆಟಗಾರರು ಪಿಎಸ್ಎಲ್ ನೋಂದಾವಣಿಯಾಗಿ ಬಳಿಕ ತಮ್ಮ ಹೆಸರುಗಳನ್ನು ಹಿಂಪಡೆದಿದ್ದರು.
ಅಂದಹಾಗೆ ಐಎಪಿಎಲ್ ಪ್ರಾರಂಭವಾಗುವ ಎರಡು ದಿನಗಳ ಮೊದಲು, ಮಾರ್ಚ್ 26 ರಂದು ಪಿಎಸ್ಎಲ್ ಪ್ರಾರಂಭವಾಗಲಿದೆ.