ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿ ಆರಂಭಕ್ಕೆ ಕೇವಲ ಐದು ದಿನಗಳು ಬಾಕಿ ಇದ್ದು, ಕೆಲವು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರತಿ ಆವೃತ್ತಿಯಲ್ಲಿ, ವಿವಿಧ ಆಟಗಾರರು ಹಲವು ಕಾರಣಗಳಿಗಾಗಿ ಲೀಗ್ನಿಂದ ಹಿಂದೆ ಸರಿಯುವುದರಿಂದ ತಡವಾಗಿ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಭಾರತೀಯ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಇದೀಗ, ಫ್ರಾಂಚೈಸಿಗಳು ಈ ವಿಷಯದ ಬಗ್ಗೆ ಕಠಿಣ ನಿಲುವನ್ನು ಅಳವಡಿಸಿಕೊಳ್ಳುವಂತೆ ಮತ್ತು ಲೀಗ್ ಅನ್ನು 'ಮುಖ್ಯವಾಗಿ' ಪರಿಗಣಿಸದ ವಿದೇಶಿ ಆಟಗಾರರನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಐಪಿಎಲ್ ತಂಡಗಳು ತಡವಾಗಿ ಬಂದವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಸೂಚಿಸಿದ್ದಾರೆ.
ಐಪಿಎಲ್ ಕಾಮೆಂಟರಿ ಪ್ಯಾನೆಲ್ನಲ್ಲಿ ಸಕ್ರಿಯ ಸದಸ್ಯರಾಗಿ ಮುಂದುವರೆದಿರುವ ಗವಾಸ್ಕರ್, ಮೈದಾನದ ಒಳಗೆ ಮತ್ತು ಹೊರಗೆ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿದವರಲ್ಲ. ಕೆಲವು ವಿದೇಶಿ ಆಟಗಾರರು ಸಾಮಾನ್ಯವಾಗಿ 'ಭಾರತೀಯ ಆತಿಥ್ಯ'ವನ್ನು ಲಘುವಾಗಿ ಪರಿಗಣಿಸುತ್ತಾರೆ. ಆದರೆ, ಅದು ಹಾಗಾಗಬಾರದು ಎಂದಿದ್ದಾರೆ.
'ಕೆಲವು ವಿದೇಶಿ ಆಟಗಾರರು ಗಾಯವನ್ನು ಹೊರತುಪಡಿಸಿ - ವೈಯಕ್ತಿಕ ಆಯ್ಕೆಗಳು ಅಥವಾ ವೇಳಾಪಟ್ಟಿಯಂತಹ ಕಾರಣಗಳಿಗಾಗಿ ಪಂದ್ಯಗಳಿಂದ ಹೊರಗುಳಿಯಬಹುದು. ಅವರು ಫ್ರಾಂಚೈಸಿಯನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಫ್ರಾಂಚೈಸಿಗಳ ಮಾಲೀಕರು ತಮ್ಮ ಆಟಗಾರರಿಗೆ ಆಗಾಗ್ಗೆ ಅವರ ಕುಟುಂಬಗಳು ಬಂದು ಅವರೊಂದಿಗೆ ಸಮಯ ಕಳೆಯಲು ಹಣ ನೀಡುತ್ತಾರೆ. ಕೋಟ್ಯಾಧಿಪತಿ ಆಟಗಾರರಿಗೆ ಯಾವುದೇ ವೆಚ್ಚವಿಲ್ಲದೆ, ಭಾರತೀಯ ನೆಲದಲ್ಲಿ ಆತಿಥ್ಯ ಸಿಗುತ್ತಿದೆ. ಇದನ್ನು ಕೆಲವರು ಹಕ್ಕು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಂತರ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ' ಎಂದು ಗವಾಸ್ಕರ್ ಸ್ಪೋರ್ಟ್ಸ್ಸ್ಟಾರ್ಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
'ವಿವಿಧ ಕಾರಣಗಳಿಗಾಗಿ ಕೆಲವು ಆಟಗಾರರು ಲಭ್ಯವಿಲ್ಲದಿರುವ ಬಗ್ಗೆ ನಾವು ಈಗಾಗಲೇ ಕೇಳುತ್ತಿದ್ದೇವೆ. ಆ ಆಟಗಾರರು ಇದನ್ನು ಮೊದಲೇ ಫ್ರಾಂಚೈಸಿಗೆ ತಿಳಿಸುವುದಿಲ್ಲ. ಫ್ರಾಂಚೈಸಿ ಮಾಲೀಕರು ಕಠಿಣವಾಗಿ ವರ್ತಿಸಿ ಈ ಆಟಗಾರರನ್ನು ಕೈಬಿಡಲು ಪ್ರಾರಂಭಿಸದಿದ್ದರೆ, ಅವರು ಪ್ರಶಸ್ತಿ ಗೆಲ್ಲುವ ಪ್ರಯತ್ನಗಳಲ್ಲಿ ತಮ್ಮನ್ನು ತಾವು ಅಡ್ಡಿಪಡಿಸಿಕೊಳ್ಳುತ್ತಾರೆ. ಆಟಗಾರರು ನಿರಂತರವಾಗಿ ಲಭ್ಯವಿಲ್ಲದಿದ್ದಾಗ ಮತ್ತು ಅದು ಅವರಿಗೆ ಬೇಕಾದಾಗ ಮಾತ್ರ ಕಾಣಿಸಿಕೊಳ್ಳುವಾಗ ಗೆಲ್ಲುವ ತಂಡವನ್ನು ಕಟ್ಟಲು ಹಾಕುವ ಎಲ್ಲ ಪ್ರಯತ್ನ ಮತ್ತು ತಂತ್ರಗಳು ನಿಷ್ಪ್ರಯೋಜಕವಾಗುತ್ತವೆ' ಎಂದು ಅವರು ಹೇಳಿದರು.
ಫಿಟ್ನೆಸ್ ಸಮಸ್ಯೆಯಿಂದಾಗಿ ಜಾಶ್ ಹೇಜಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ರಂತಹ ವಿದೇಶಿ ತಾರೆಗಳು ಪಂದ್ಯಾವಳಿಗೆ ತಡವಾಗಿ ಸೇರುವ ನಿರೀಕ್ಷೆಯಿದೆ.
'ಆದಾಗ್ಯೂ, ಕಾರ್ಪರ್ಗಳು (ವಿಮರ್ಶಕರು) ಸಹ ರಹಸ್ಯವಾಗಿ ನಿಗಾ ಇಡುವ ಪಂದ್ಯಾವಳಿ ಇದಾಗಿದ್ದು, ಮೇ 31 ರವರೆಗೆ ಸಂಜೆಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ಇರುತ್ತವೆ' ಎಂದು ಗವಾಸ್ಕರ್ ಪ್ರತಿಪಾದಿಸಿದರು.