ಐಪಿಎಲ್ 2026 ಆರಂಭವಾಗುವ ಮೊದಲೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖ ಆಟಗಾರರಿಗೆ ಗಾಯದ ಸಮಸ್ಯೆಗಳು ಎದುರಾಗಿದ್ದು, ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಈ ಬೆನ್ನಲ್ಲೇ ಮಂಗಳವಾರ, ನೈಟ್ಸ್ ಅನ್ಪ್ಲಗ್ಡ್ 3.0 ಕಾರ್ಯಕ್ರಮದ ಸಂದರ್ಭದಲ್ಲಿ, ರಿಂಕು ಸಿಂಗ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.
ಐಪಿಎಲ್ 2026ರ ಹರಾಜಿನ ನಂತರ, ಯುಪಿ ಬ್ಯಾಟ್ಸ್ಮನ್ರನ್ನು ಈ ವರ್ಷ ನಾಯಕರನ್ನಾಗಿ ಮಾಡಬಹುದೆಂದು ಹಲವರು ನಂಬಿದ್ದರು. ಆದರೆ, ಇದೀಗ ಅಂಜಿಕ್ಯ ರಹಾನೆ ಅವರೇ ನಾಯಕನಾಗಿ ಮುಂದುವರಿಯಲಿದ್ದು, ರಿಂಕು ಸಿಂಗ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಕೆಕೆಆರ್ ಆಡಳಿತ ಮಂಡಳಿಯು ಭವಿಷ್ಯದಲ್ಲಿ ರಿಂಕು ಸಿಂಗ್ ಅವರನ್ನು ನಾಯಕತ್ವದ ಪಾತ್ರಕ್ಕೆ ಏರಿಸುವ ಯೋಜನೆಯನ್ನು ಹೊಂದಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.
2018 ರಿಂದ ಫ್ರಾಂಚೈಸಿಯೊಂದಿಗೆ ಇರುವ ರಿಂಕು ಇದೀಗ ಪರಿಪೂರ್ಣ ಸ್ಪರ್ಧಿಯಾಗಿದ್ದಾರೆ. ಅವರು ಕೆಕೆಆರ್ ಪರವಾಗಿ 59 ಪಂದ್ಯಗಳನ್ನು ಆಡಿದ್ದಾರೆ. ಆ ಪಂದ್ಯಗಳಲ್ಲಿ, ಅವರು 30ರ ಸರಾಸರಿಯಲ್ಲಿ 1,099 ರನ್ ಗಳಿಸಿದ್ದಾರೆ ಮತ್ತು 67 ಅವರ ಅತ್ಯುತ್ತಮ ರನ್ ಗಳಿಕೆಯಾಗಿದೆ. ತಂಡದಲ್ಲಿ, ಅವರನ್ನು ಫಿನಿಷರ್ ಎಂದು ನೋಡಲಾಗುತ್ತದೆ. ಆದರೆ, ಈ ಬಾರಿ ಅವರು 4 ಅಥವಾ 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಇದಕ್ಕೂ ಮೊದಲು, ಭಾರತದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಅವರನ್ನು ಕೆಕೆಆರ್ ನಾಯಕನನ್ನಾಗಿ ಮಾಡುವ ಅಗತ್ಯವನ್ನು ಪ್ರತಿಪಾದಿಸಿದ್ದರು. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, 'ಕೆಕೆಆರ್ ರಿಂಕು ಸಿಂಗ್ ಅವರನ್ನು ಭವಿಷ್ಯದ ನಾಯಕನನ್ನಾಗಿ ಮಾಡಬೇಕು. ರಿಂಕು ಸಿಂಗ್ ಒಬ್ಬ ಎಲ್ಲ ಸ್ವರೂಪದ ಆಟಗಾರ. ಅವರು ಟೆಸ್ಟ್ ತಂಡದ ಭಾಗವಾಗಿಲ್ಲದಿದ್ದರೂ, ಅವರು ಎಲ್ಲ ಸ್ವರೂಪಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಬಹುದು. ನಾನು ಉತ್ತರ ಪ್ರದೇಶದಿಂದ ಬಂದಿದ್ದೇನೆ ಮತ್ತು ಅವರು ಉತ್ತರ ಪ್ರದೇಶಕ್ಕಾಗಿ ಏನು ಮಾಡುತ್ತಾರೆಂದು ನನಗೆ ತಿಳಿದಿದೆ. ಬಹಳಷ್ಟು ಬ್ಯಾಟ್ಸ್ಮನ್ಗಳು ರನ್ ಗಳಿಸುತ್ತಾರೆ. ಆದರೆ, ಅವರ ರನ್ಗಳು ತಂಡದ ಗೆಲುವಿನ ಉದ್ದೇಶದಿಂದ ಬರುತ್ತವೆ. ಆದ್ದರಿಂದ, ಆ ವ್ಯಕ್ತಿ ಸಿದ್ಧನಿದ್ದಾನೆ ಮತ್ತು ಉತ್ತರ ಪ್ರದೇಶಕ್ಕೆ ನಾಯಕತ್ವ ವಹಿಸುತ್ತಾನೆ ಎಂದರು.
'ನಾಯಕತ್ವ ಮತ್ತು ಬ್ಯಾಟಿಂಗ್ ಅನ್ನು ಒಟ್ಟಿಗೆ ನಿಭಾಯಿಸಲು ಅವರಿಗೆ ಮಾನಸಿಕ ಶಕ್ತಿ ಇದೆ. ಅವರ ಬಳಿ ಸಿದ್ಧ ವ್ಯಕ್ತಿ ಇದ್ದಾರೆ. ರಹಾನೆ ನಂತರ ಅವರಿಗೆ ನಾಯಕತ್ವ ನೀಡುತ್ತಾರೆಯೇ, ಈ ಆವೃತ್ತಿಯ ಮಧ್ಯದಲ್ಲಿ ಮಾಡುತ್ತಾರೆಯೇ ಅಥವಾ ಉಪನಾಯಕನನ್ನಾಗಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಅವರನ್ನು ತಂಡಕ್ಕೆ ಸೇರಿಸಿಕೊಂಡರೆ ಸಾಕು, ಅದು ಕೆಕೆಆರ್ಗೆ ದೀರ್ಘಾವಧಿಯ ಹೂಡಿಕೆಯಾಗಲಿದೆ' ಎಂದು ಅವರು ಹೇಳಿದರು.
ಪ್ರಾದೇಶಿಕ ಕ್ರೀಡಾ ಅಧಿಕಾರಿಯಾಗಿ ನೇಮಕ
ಭಾರತದ ಬ್ಯಾಟ್ಸ್ಮನ್ ರಿಂಕು ಸಿಂಗ್ ಅವರನ್ನು ಶ್ಲಾಘಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರ್ಕಾರ ಅವರಿಗೆ ಪ್ರಾದೇಶಿಕ ಕ್ರೀಡಾ ಅಧಿಕಾರಿಯಾಗಿ ನೇಮಕಾತಿ ಪತ್ರ ನೀಡಿದೆ ಎಂದು ಹೇಳಿದ್ದಾರೆ. ಐಪಿಎಲ್ 2023ರ ಸಮಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ 200 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸಮಯದಲ್ಲಿ ಕೊನೆಯ ಓವರ್ನಲ್ಲಿ ಗುಜರಾತ್ ಟೈಟಾನ್ಸ್ನ ಯಶ್ ದಯಾಳ್ ಅವರಿಗೆ ಐದು ಸತತ ಸಿಕ್ಸರ್ ಸಿಡಿಸುವುದರ ಮೂಲಕ ರಿಂಕು ಖ್ಯಾತಿ ಗಳಿಸಿದರು. ಬಳಿಕ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, ಏಷ್ಯಾ ಕಪ್ ವಿಜೇತ ಮತ್ತು ಇತ್ತೀಚೆಗೆ, ಟೀಂ ಇಂಡಿಯಾದೊಂದಿಗೆ ಟಿ20 ವಿಶ್ವಕಪ್ ವಿಜೇತರಾಗಿದ್ದಾರೆ.
ಬುಧವಾರ ರಿಂಕು ಸಿಂಗ್ ಅವರಿಗೆ ನೇಮಕಾತಿ ಪತ್ರ ಮತ್ತು ಬಹುಮಾನದ ಹಣವನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ, ಸರ್ಕಾರಿ ಸೇವೆಗಳಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡುವ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶ ಎಂದರು.
'ಸರ್ಕಾರಿ ಸೇವೆಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡುವ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶ. ಇಲ್ಲಿಯವರೆಗೆ, ನಾವು 500ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ವಿವಿಧ ಪೊಲೀಸ್ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ಒದಗಿಸಿದ್ದೇವೆ. ಕ್ರಿಕೆಟ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿನ ಅವರ ಸಾಧನೆಗಾಗಿ, ರಿಂಕು ಸಿಂಗ್ ಅವರಿಗೆ ಪ್ರಾದೇಶಿಕ ಕ್ರೀಡಾ ಅಧಿಕಾರಿಯಾಗಿ ನೇಮಕಾತಿ ಪತ್ರವನ್ನು ನೀಡಲಾಗಿದೆ. ಅವರು ಈಗಾಗಲೇ ಒಂದು ಶಿಬಿರದ (ಐಪಿಎಲ್ನಲ್ಲಿ ಕೆಕೆಆರ್) ಭಾಗವಾಗಿದ್ದಾರೆ. ಆದ್ದರಿಂದ ಅವರು ಅಲ್ಲಿಗೆ ಹೋಗಿದ್ದಾರೆ. ಇಂದು ಇಲ್ಲಿ ಅನೇಕ ಇತರ ಆಟಗಾರರು ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ' ಎಂದು ಅವರು ಹೇಳಿದರು.