ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದ ನಂತರ, ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಮುಂಬೈ ಇಂಡಿಯನ್ಸ್ (MI) ಪಂದ್ಯಕ್ಕೂ ಮುನ್ನ ಭಾರತೀಯ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಮುಂದಿನ ಆವೃತ್ತಿಯಲ್ಲಿ ಉತ್ತಮ ಸ್ಥಾನದಲ್ಲಿರಲು, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳಲು ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿದ್ದು, ಅಂಕಪಟ್ಟಿಯಲ್ಲಿ ಕೆಳಗಿರುವ MI ಅವರಿಗೆ ಸುಲಭವಾದ ಗುರಿಯಾಗಬಹುದು. ಹೀಗಾಗಿ, ಮುಂಬೈ ಇಂಡಿಯನ್ಸ್ ತಂಡವು ತಮ್ಮ ಕೊನೆಯ ಕೆಲವು ಪಂದ್ಯಗಳಲ್ಲಿ ಹೆಚ್ಚಿನ ಯುವಕರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ 'ಕ್ರಿಕೆಟ್ ಲೈವ್' ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್, 'ಪಂಜಾಬ್ ಕಿಂಗ್ಸ್ ಗೆಲುವಿನ ಹಾದಿಗೆ ಮರಳಲು ಯತ್ನಿಸುತ್ತದೆ. ಸತತ ನಾಲ್ಕು ಪಂದ್ಯಗಳನ್ನು ಸೋತ ನಂತರ, ನೀವು ನಿಮ್ಮ ಬಗ್ಗೆ ಅನುಮಾನಿಸಲು ಪ್ರಾರಂಭಿಸುತ್ತೀರಿ. ನಂತರ ನೀವು ಸುತ್ತಲೂ ನೋಡಲು ಪ್ರಾರಂಭಿಸುತ್ತೀರಿ. ನೀವು ಪ್ಲೇಯಿಂಗ್ XI ನಲ್ಲಿ ಬದಲಾವಣೆ ಮಾಡಬೇಕೇ ಅಥವಾ ವಿಭಿನ್ನವಾಗಿ ಏನಾದರೂ ಮಾಡಬೇಕೇ ಎಂಬ ಬಗ್ಗೆ ನೋಡುತ್ತೀರಿ. ಪಂಜಾಬ್ ಇದೀಗ ಗೆಲ್ಲಲು ಬಯಸುತ್ತದೆ' ಎಂದು ಹೇಳಿದರು.
'ನಾನು ಮುಂಬೈ ಇಂಡಿಯನ್ಸ್ ಬೆಂಬಲಿಗ. ಈಗ ಅವರು ಪ್ಲೇಆಫ್ಗೆ ಅರ್ಹತೆ ಪಡೆದಿಲ್ಲ, ಆದ್ದರಿಂದ ಅವರು ಕೆಲವು ಕಿರಿಯ ಆಟಗಾರರನ್ನು ಪ್ರಯತ್ನಿಸುವುದನ್ನು ನೋಡಲು ಬಯಸುತ್ತೇನೆ. ಅವರು ಯಾರನ್ನು ಬಿಡುತ್ತಾರೆ ಎಂಬುದನ್ನು ಅವರು ಮತ್ತು ಅವರ ತಂಡದ ನಿರ್ವಹಣೆ ಮಾಡುವವರು ನಿರ್ಧರಿಸಬೇಕು. ಆದರೆ, ಅವರ ಮೀಸಲು ತಂಡದಲ್ಲಿ ಕೆಲವು ಯುವ ಆಟಗಾರರಿದ್ದಾರೆ. ಅವರಿಗೆ ಇನ್ನೂ ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಅವಕಾಶ ಸಿಕ್ಕಿಲ್ಲ. ಉಳಿದ ಮೂರು ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಿ ಮತ್ತು ಅವರು ಹೇಗಿದ್ದಾರೆಂದು ನೋಡಿ. ಹಾಗೆ ಮಾಡಿದಾಗ, ಮುಂದಿನ ಆವೃತ್ತಿಗೆ ನೀವು ಉತ್ತಮ ಸ್ಥಾನದಲ್ಲಿರುತ್ತೀರಿ' ಎಂದು ಅವರು ಹೇಳಿದರು.
ರಾಜ್ ಅಂಗದ್ ಬಾವಾ, ಆರಂಭಿಕ ದಾನಿಶ್ ಮಾಲೆವಾರ್, ವಿಕೆಟ್ ಕೀಪರ್-ಬ್ಯಾಟರ್ ರಾಬಿನ್ ಮಿಂಜ್, ಕ್ರಿಶ್ ಭಗತ್ ಮತ್ತು ರಘು ಶರ್ಮಾ ಅವರು ಮುಂಬೈ ಈ ಆವೃತ್ತಿಯ ತಮ್ಮ ಕೊನೆಯ ಕೆಲವು ಪಂದ್ಯಗಳಲ್ಲಿ ಪ್ರಯತ್ನಿಸಬಹುದಾದ ಪ್ರತಿಭೆಗಳಾಗಿದ್ದಾರೆ.