ಯಶ್ ದಯಾಳ್ 
ಕ್ರಿಕೆಟ್

'ಈ ಆವೃತ್ತಿಯಲ್ಲಿ ಆಡದಿರುವುದು ನನ್ನ ನಿರ್ಧಾರವಲ್ಲ': RCB ಪರ ಮೈದಾನಕ್ಕಿಳಿಯದ ಕುರಿತು ಯಶ್ ದಯಾಳ್ ಭಿನ್ನ ಹೇಳಿಕೆ!

ಈ ಆವೃತ್ತಿಯಲ್ಲಿ ಮೈದಾನದಿಂದ ಹೊರಗುಳಿದಿದ್ದರೂ, ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ಆಡಳಿತದೊಂದಿಗೆ ನಾನು ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರವಾಗಿ ಐಪಿಎಲ್‌ 2026ನೇ ಆವೃತ್ತಿಯಲ್ಲಿ ಆಡದಿರುವ ಬಗ್ಗೆ ವೇಗಿ ಯಶ್ ದಯಾಳ್ ಕೊನೆಗೂ ಸ್ಪಷ್ಟನೆ ನೀಡಿದ್ದು, ಈ ವರ್ಷ ತಮ್ಮ ಅನುಪಸ್ಥಿತಿಯ ಹೊರತಾಗಿಯೂ ತಾವು ಇನ್ನೂ ತಂಡದ ಭಾಗವಾಗಿರುವುದಾಗಿ ಹೇಳಿದ್ದಾರೆ. ಆವೃತ್ತಿಯ ಆರಂಭಕ್ಕೂ ಮುನ್ನ, ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು 'ವೈಯಕ್ತಿಕ ಪರಿಸ್ಥಿತಿ'ಯಿಂದಾಗಿ ಈ ವರ್ಷ ಯಶ್ ದಯಾಳ್ ಅವರು ಆಡುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಆದಾಗ್ಯೂ, 28 ವರ್ಷದ ದಯಾಳ್ ಈ ಆವೃತ್ತಿಯಲ್ಲಿ ತಂಡದಿಂದ ಹೊರಗುಳಿದಿರುವ ಬಗ್ಗೆ ಭಿನ್ನ ಹೇಳಿಕೆ ನೀಡಿದ್ದಾರೆ.

ಟಾಕ್ ವಿತ್ ಮನ್ವೇಂದ್ರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ದಯಾಳ್, ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಸದ್ಯ ನಡೆಯುತ್ತಿರುವ ಆವೃತ್ತಿಯಿಂದ ಹೊರಗುಳಿಯುವುದು ನನ್ನ ನಿರ್ಧಾರವಲ್ಲ ಎಂದರು.

'ಹೊರಗೆ ಕುಳಿತು ದೂರದರ್ಶನದಲ್ಲಿ ನೋಡುವಾಗ, ಕೆಲವೊಮ್ಮೆ ನಾನು ಎದ್ದು ನಿಲ್ಲುತ್ತೇನೆ. ಆದರೆ, ಅದು ನನ್ನ ತಂಡ ಮತ್ತು ಅವರು ನನ್ನನ್ನು ತಂಡದಿಂದ ತೆಗೆದುಹಾಕಿಲ್ಲ. ಅವರು ನನ್ನನ್ನು ಉಳಿಸಿಕೊಳ್ಳುವ ಪಟ್ಟಿಯಲ್ಲಿ ಇರಿಸಿದರು ಮತ್ತು ಬದಲಿ ಆಟಗಾರನನ್ನು ಆಯ್ಕೆಮಾಡಲಿಲ್ಲ. ಅವರು ಬಹುಶಃ ನಾನು ಒಂದು ಪ್ರಮುಖ ಭಾಗ ಎಂದು ಭಾವಿಸುತ್ತಾರೆ. ಇನ್ನೊಂದು ವಿಷಯವೆಂದರೆ, ಈ ಆವೃತ್ತಿಯಿಂದ ಹೊರಗುಳಿಯುವುದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಹೇಳಿಕೆ ವಿವಾದಾತ್ಮಕವಾಗಬಹುದು. ಆದರೆ, ನಿರ್ಧಾರವನ್ನು ಯಾವಾಗಲೂ ತಂಡದ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಆರ್‌ಸಿಬಿ ನಿರ್ಧಾರದ ಹಿಂದಿನ ಕಾರಣವೇನೆಂದು ನನಗೆ ತಿಳಿದಿಲ್ಲ. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ತಂಡವು ನನ್ನನ್ನು ಮಿಸ್ ಮಾಡಿಕೊಳ್ಳುತ್ತದೆಯೋ ಇಲ್ಲವೋ ನನಗೆ ತಿಳಿದಿಲ್ಲ, ಅಭಿಮಾನಿಗಳು ಹಾಗೆ ಹೇಳುತ್ತಾರೆ' ಎಂದು ದಯಾಳ್ ಹೇಳಿದರು.

ಈ ಆವೃತ್ತಿಯಲ್ಲಿ ಮೈದಾನದಿಂದ ಹೊರಗುಳಿದಿದ್ದರೂ, ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ಆಡಳಿತದೊಂದಿಗೆ ನಾನು ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

'ನಾನು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ನಾನು ನಿರ್ದೇಶಕರೊಂದಿಗೆ, ತರಬೇತುದಾರರೊಂದಿಗೆ ಮತ್ತು ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡಿದ್ದೇನೆ. ನಾವು ಆಗ್ಗಾಗ್ಗೆ ಮಾತುಕತೆ ನಡೆಸುತ್ತೇವೆ ಮತ್ತು ನಮ್ಮ ನಡುವಿನ ಸಂಪರ್ಕ ಕಡಿತಗೊಂಡಿಲ್ಲ. ಯಾವುದೇ ಅಂತರವಿಲ್ಲ. ಎಲ್ಲವೂ ಸ್ಪಷ್ಟವಾಗಿದೆ ಮತ್ತು ಬಗೆಹರಿಯಲ್ಪಟ್ಟಿದೆ' ಎಂದು ಅವರು ಹೇಳಿದರು.

ವೇಗಿ ಯಶ್ ದಯಾಳ್ ಮೇಲೆ ಲೈಂಗಿಕ ಶೋಷಣೆಯ ಆರೋಪವಿದ್ದು, ಅದರ ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಪ್ರತ್ಯೇಕ ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ, ಅವರು ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಲು ಅಡ್ಡಿಯುಂಟುಮಾಡಿದೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುವ 27 ವರ್ಷದ ದಯಾಳ್ ವಿರುದ್ಧ ಜುಲೈ 6 ರಂದು ಗಾಜಿಯಾಬಾದ್ ಜಿಲ್ಲೆಯ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 69 (ವಂಚನೆಯ ವಿಧಾನಗಳನ್ನು ಬಳಸಿಕೊಂಡು ಲೈಂಗಿಕ ಸಂಭೋಗ ಇತ್ಯಾದಿ) ಅಡಿಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಮದುವೆಯ ನೆಪದಲ್ಲಿ ಮಹಿಳೆಯೊಬ್ಬರನ್ನು ಲೈಂಗಿಕ ಶೋಷಣೆ ಮಾಡಿದ ಆರೋಪ ಕೂಡ ದಯಾಳ್ ಮೇಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ