ಧರ್ಮಶಾಲಾ: ಆರ್ಸಿಬಿಯ ಯಶಸ್ಸು ಕೇವಲ ವಿರಾಟ್ ಕೊಹ್ಲಿ ಮೇಲೆ ನಿಂತಿಲ್ಲ. ಪ್ಲೇಆಫ್ನಂತಹ ಮಹತ್ವದ ಹಂತದಲ್ಲಿ ಅವರು ಅತಿಯಾದ ಹೊಣೆಗಾರಿಕೆಯನ್ನು ತಮ್ಮ ಮೇಲೆಯೇ ತೆಗೆದುಕೊಳ್ಳಬಾರದು” ಎಂದು ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಎಚ್ಚರಿಕೆ ನೀಡಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ ಸಂಜಯ್ ಮಂಜ್ರೇಕರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಂಡದ ಯಶಸ್ಸು ಕೇವಲ ವಿರಾಟ್ ಕೊಹ್ಲಿ ಅವರ ಪ್ರದರ್ಶನದ ಮೇಲಷ್ಟೇ ನಿಂತಿಲ್ಲ ಎಂಬುದನ್ನು ಆರ್ಸಿಬಿ ಮರೆಯಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದು, 14 ಇನ್ನಿಂಗ್ಸ್ಗಳಲ್ಲಿ 557 ರನ್ಗಳನ್ನು ಗಳಿಸಿದ್ದಾರೆ. ಶತಕ ಹಾಗೂ ನಾಲ್ಕು ಅರ್ಧಶತಕಗಳೊಂದಿಗೆ 163.82ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ, ಆರ್ಸಿಬಿ ಬ್ಯಾಟಿಂಗ್ನ ಪ್ರಮುಖ ಆಧಾರಸ್ತಂಭರಾಗಿದ್ದಾರೆ.
ಆದರೆ, ಪ್ಲೇಆಫ್ಗಳಂತಹ ಒತ್ತಡದ ಪಂದ್ಯಗಳಲ್ಲಿ ಕೊಹ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ತಮ್ಮ ಮೇಲೆಯೇ ತೆಗೆದುಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಇದೇ ತಂಡಕ್ಕೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಆರ್ಸಿಬಿ ತನ್ನ ಆಟದ ಮಾದರಿಯನ್ನು ಬದಲಾಯಿಸಬಾರದು. ವಿರಾಟ್ ಕೊಹ್ಲಿ ಪ್ರಮುಖ ಆಟಗಾರರಾಗಿದ್ದರೂ ತಂಡದ ಸಂಪೂರ್ಣ ಭವಿಷ್ಯ ಅವರೊಬ್ಬರ ಮೇಲೆ ಅವಲಂಬಿತವಾಗಿಲ್ಲ. ಇದೇ ಕಾರಣಕ್ಕೆ ಆರ್ಸಿಬಿ ಈ ಬಾರಿ ಉತ್ತಮ ತಂಡವಾಗಿ ಹೊರಹೊಮ್ಮಿದೆ. ಒಂದು ವೇಳೆ ಕೊಹ್ಲಿ ಅತಿಯಾದ ಹೊಣೆಗಾರಿಕೆಯನ್ನು ಹೊತ್ತು, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದರೆ ಅದು ತಂಡಕ್ಕೆ ಹಾನಿಕಾರಕವಾಗಬಹುದು ಎಂದು ಹೇಳಿದ್ದಾರೆ.