ಅಹ್ಮದಾಬಾದ್: ಐಪಿಎಲ್ 2026ರ ಫೈನಲ್ ಪಂದ್ಯ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಅಲ್ರೌಂಡರ್ ನನ್ನು ಆಡಿಸದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಸಲಹೆ ನೀಡಿದ್ದಾರೆ.
ಹೌದು.. ಭಾನುವಾರ ಸಂಜೆ ನಡೆಯಲಿರುವ ಐಪಿಎಲ್ 2026ರ ಫೈನಲ್ನಲ್ಲಿ ಆರ್ ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಸೆಣಸಾಟಕ್ಕೂ ಮುನ್ನ ಭಾರತದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ (Kris Srikkanth) ಆರ್ಸಿಬಿಗೆ ಮಹತ್ವದ ಸಲಹೆ ನೀಡಿದ್ದಾರೆ.
ಆರ್ಸಿಬಿ ತಂಡವು ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೋ ಶೆಫರ್ಡ್ (Romario Shepherd) ಅವರನ್ನು ಫೈನಲ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, "ಆರ್ಸಿಬಿ ಈ ಪಂದ್ಯ ಸೋಲುವ ಏಕೈಕ ಮಾರ್ಗವೆಂದರೆ ಅದು ರೊಮಾರಿಯೊ ಶೆಫರ್ಡ್ ಮಾತ್ರ. ಆತ ಕೇವಲ ಮೂರು ಓವರ್ಗಳನ್ನು ಬೌಲಿಂಗ್ ಮಾಡಿದರೂ ಆರ್ ಸಿಬಿ ಕಥೆ ಮುಗಿದಂತೆಯೇ.. ಶೆಫರ್ಡ್ ಬೌಲಿಂಗ್ ಮಾಡಬಾರದು, ಅಷ್ಟೇ ಅಲ್ಲ ಅವರನ್ನು ಅಂತಿಮ ಹನ್ನೊಂದರಲ್ಲೂ ಸೇರಿಸಬಾರದು ಎಂದು ಶ್ರೀಕಾಂತ್ ಹೇಳಿದ್ದಾರೆ.
ಶೆಫರ್ಡ್ರ ಬೌಲಿಂಗ್ ಪ್ರದರ್ಶನ ನಿರಾಶಾದಾಯಕ
ಈ ಆವೃತ್ತಿಯಲ್ಲಿ ಶೆಫರ್ಡ್ ಬ್ಯಾಟ್ನಿಂದ ಕೆಲವು ಉಪಯುಕ್ತ ಕೊಡುಗೆಗಳನ್ನು ನೀಡಿದ್ದರೂ, ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅವರು ಏಳು ವಿಕೆಟ್ಗಳನ್ನು ಪಡೆದಿದ್ದರೂ, ಅವರ ಎಕಾನಮಿ ದರ 12ಕ್ಕಿಂತ ಹೆಚ್ಚಿದ್ದು ಇದು ತಂಡಕ್ಕೆ ಚಿಂತೆಯ ವಿಷಯವಾಗಿದೆ ಎಂದರು.
ಫಿಲ್ ಸಾಲ್ಟ್ ಬದಲು ವೆಂಕಟೇಶ್ ಅಯ್ಯರ್ ಮುಂದುವರಿಯಲಿ
ಅಂತೆಯೇ ಇಂಗ್ಲೆಂಡ್ ಬ್ಯಾಟರ್ ಫಿಲ್ ಸಾಲ್ಟ್ (Phil Salt) ಫಿಟ್ ಆಗಿ ತಂಡಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಶ್ರೀಕಾಂತ್ ಅವರು ವೆಂಕಟೇಶ್ ಅಯ್ಯರ್ರನ್ನು ಕೈಬಿಡಬಾರದು ಎಂದು ಸಲಹೆ ನೀಡಿದ್ದಾರೆ. "ಫಿಲ್ ಸಾಲ್ಟ್ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಅವರು ಫಿಟ್ ಆಗಿದ್ದರೂ ಈಗ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಏಕೆಂದರೆ ವೆಂಕಟೇಶ್ ಅಯ್ಯರ್ (Venkatesh Iyer) ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಹೇಳಿದರು.
ಗುಜರಾತ್ ಗೆಲ್ಲಬೇಕು ಅಂದ್ರೆ ಕೊಹ್ಲಿ-ಪಡಿಕ್ಕಲ್ ಜೋಡಿಯನ್ನು ಬೇರ್ಪಡಿಸಬೇಕು
ಇದೇ ವೇಳೆ ಗುಜರಾತ್ ತಂಡದ ಬಗ್ಗೆಯೂ ಮಾತನಾಡಿರುವ ಶ್ರೀಕಾಂತ್, 'ಆರ್ಸಿಬಿಯ ಪ್ರಮುಖ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (Virat Kohli) ಮತ್ತು ದೇವದತ್ ಪಡಿಕ್ಕಲ್ (Devdutt Padikkal) ನಡುವಿನ ಜೊತೆಯಾಟವನ್ನು ಬೇಗ ಮುರಿಯುವುದು ಅತ್ಯಗತ್ಯ. ಜಿಟಿ ಗೆಲ್ಲಬೇಕಾದರೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಜೊತೆಯಾಟವನ್ನು ಮುರಿಯಲೇಬೇಕು. ವಿರಾಟ್ ಕೇವಲ 40 ರನ್ ಗಳಿಸಿದರೂ ಆರ್ಸಿಬಿ ಬಹುತೇಕ ಗೆಲ್ಲುತ್ತದೆ. ಆದರೆ ಪಡಿಕ್ಕಲ್ ಜೊತೆಗೆ ಅವರ ಪಾಲುದಾರಿಕೆಯೇ ತಂಡಕ್ಕೆ ದೊಡ್ಡ ಬಲವಾಗಿದೆ" ಎಂದು ವಿಶ್ಲೇಷಿಸಿದರು.
ಈ ಮೂವರಲ್ಲಿ ಇಬ್ಬರನ್ನು ಬೇಗ ಔಟ್ ಮಾಡಲೇಬೇಕು
ಅಲ್ಲದೆ ಆರ್ಸಿಬಿಯ ಮೂರು ಪ್ರಮುಖ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಟಿದಾರ್ (Rajat Patidar) ಅವರನ್ನು ಆರಂಭದಲ್ಲೇ ಔಟ್ ಮಾಡುವುದು ಅತ್ಯಗತ್ಯ ಎಂದರು. "ಈ ಮೂವರಲ್ಲಿ ಯಾರಾದರೂ ಇಬ್ಬರು ಉತ್ತಮವಾಗಿ ಆಡಿದರೆ ಆರ್ಸಿಬಿ ಗೆಲ್ಲುತ್ತದೆ. ಆದ್ದರಿಂದ ಜಿಟಿ ಗೆಲ್ಲಬೇಕಾದರೆ ಈ ಮೂವರಲ್ಲಿ ಕನಿಷ್ಠ ಇಬ್ಬರನ್ನು ಆರಂಭದಲ್ಲೇ ಪೆವಿಲಿಯನ್ಗೆ ಕಳುಹಿಸಬೇಕು. ಆಗ ಮಾತ್ರ ಅವರಿಗೆ ಗೆಲುವಿನ ಅವಕಾಶ ಸಿಗುತ್ತದೆ" ಎಂದು ಹೇಳಿದರು.
ರಬಾಡಾ-ಸಿರಾಜ್ ಮೇಲೆ ಜಿಟಿ ಭರವಸೆ
ಇನ್ನು ಜಿಟಿ ಬೌಲಿಂಗ್ ಬಗ್ಗೆ ಮಾತನಾಡಿದ ಶ್ರೀಕಾಂತ್, ಜಿಟಿ ಪರ ವೇಗಿಗಳಾದ ಕಗಿಸೋ ರಬಾಡಾ ಮತ್ತು ಮಹಮದ್ ಸಿರಾಜ್ ಹೊಸ ಚೆಂಡಿನಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಬೇಕು. ಬಾಡಾ ಮತ್ತು ಸಿರಾಜ್ ಒಟ್ಟಿಗೆ ಉತ್ತಮ ಬೌಲಿಂಗ್ ಮಾಡಲೇಬೇಕು ಎಂದರು.
ಫೈನಲ್ ಪಂದ್ಯಕ್ಕೂ ಮುನ್ನ ಶ್ರೀಕಾಂತ್ ನೀಡಿರುವ ಈ ವಿಶ್ಲೇಷಣೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಆರ್ಸಿಬಿ ತಂಡದ ಆಯ್ಕೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.