ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ "ನಿಜವಾಗಿಯೂ ವಿಶೇಷ" ಪ್ರತಿಭೆ ಎಂದು ಶ್ಲಾಘಿಸಿದ್ದಾರೆ.
"ಎಲ್ಲರೂ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ನಾನು ಸಹ ಅವರ ಬ್ಯಾಟಿಂಗ್ ಅನ್ನು ನೋಡಿದೆ. ಆತ ಓರ್ವ ಅದ್ಭುತ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ನಿಜವಾಗಿಯೂ ವಿಶೇಷ ವ್ಯಕ್ತಿ" ಎಂದು ಸಚಿನ್ ಕ್ರಿಕ್ಇನ್ಫೊ ಆನರ್ಸ್ನಲ್ಲಿ ತಿಳಿಸಿದ್ದಾರೆ.
ಬಿಹಾರದ ಸಮಷ್ಟಿಪುರದ 15 ವರ್ಷದ ಈ ಆಟಗಾರ ಈ ಐಪಿಎಲ್ನ ಈ ಆವೃತ್ತಿಯಲ್ಲಿ 237.31 ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ 776 ರನ್ ಗಳಿಸಿ, ಆಟದ ಅತ್ಯಂತ ರೋಮಾಂಚಕಾರಿ ಯುವ ಆಟಗಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಯುವ ಪ್ರತಿಭೆಗೆ ತೆಂಡೂಲ್ಕರ್ ಸಲಹೆ
ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಭೆಯನ್ನು ಹೊಂದಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಚಿನ್ ಹೇಳಿದ್ದಾರೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲಿ ಅವರ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಡದಂತೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಯುವ ಆಟಗಾರ ಟೆಸ್ಟ್ ಕ್ರಿಕೆಟ್ ಆಡಬೇಕೆ? ಎಂಬ ಪ್ರಶ್ನೆಗೆ ಸಮತೋಲನದ ಉತ್ತರ ನೀಡಿದ ಸಚಿನ್, ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಇಷ್ಟಪಡುವುದಾಗಿ ಹೇಳಿದ್ದಾರೆ. ಆದಾಗ್ಯೂ, ಟೆಸ್ಟ್ ಮಾದರಿಯ ಕ್ರಿಕೆಟ್ ಆಡುವಂತೆ ವೈಭವ್ ಸೂರ್ಯವಂಶಿಯನ್ನು ಒತ್ತಾಯಪಡಿಸಬಾರದು ಎಂದು ಅವರು ಹೇಳಿದ್ದಾರೆ.
"ನಾನು ವೈಭವ್ ಸೂರ್ಯವಂಶಿ ಅವರನ್ನು ಟೆಸ್ಟ್ ಕ್ರಿಕೆಟ್ನಲ್ಲಿ ನೋಡಲು ಬಯಸುತ್ತೇನೆ. ಆದರೆ ಈ ವಿಚಾರವಾಗಿ ಅವರ ಮೇಲೆ ಯಾವುದೇ ಒತ್ತಡ ಹಾಕಬಾರದು. ಸಮಯ ಬಂದಾಗ ಅವರು ಖಂಡಿತವಾಗಿಯೂ ಟೆಸ್ಟ್ ಮಾದರಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿಭಿನ್ನ ಶೈಲಿಯ ಸವಾಲುಗಳು ಇರುತ್ತವೆ. ವಯಸ್ಸಿನ ಜೊತೆಗೆ ಆಟಗಾರ ಈ ಸವಾಲುಗಳನ್ನು ಮೀರಿ ಯಶಸ್ವಿಯಾಗುವುದನ್ನು ಕಲಿಯುತ್ತಾನೆ. ವೈಭವ್ ಕೂಡ ಅದೇ ರೀತಿ ಮಾಡಲಿದ್ದಾರೆ. ಆದರೆ ಈ ಯುವ ಆಟಗಾರನಿಗೆ ಟೆಸ್ಟ್ ಕ್ರಿಕೆಟ್ ಆಡುವಂತೆ ಒತ್ತಾಯಿಸುವುದು ಸರಿಯಲ್ಲ" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.