ಚೆನ್ನೈ: ಕಳೆದ ವರ್ಷ ನಡೆದ ಪುರುಷರ ಟಿ20 ಏಷ್ಯಾ ಕಪ್ನಂತೆಯೇ, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ನಂತರ ಭಾರತೀಯ ಮಹಿಳಾ ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಕೇಂದ್ರ ಗೃಹ ಸಚಿವರೂ ಆಗಿರುವ ನಖ್ವಿ ಅವರಿಂದ ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡ ಟ್ರೋಫಿ ಸ್ವೀಕರಿಸುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು.
ಪಂದ್ಯ ಮುಕ್ತಾಯದ ಹಂತದಲ್ಲಿದ್ದಾಗ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತಿತರ ಅಧಿಕಾರಿಗಳು ಪರಸ್ಪರ ಚರ್ಚಿಸುತ್ತಿರುವ ದೃಶ್ಯಗಳು ಕಂಡುಬಂದವು. ಆದರೆ, ಪಂದ್ಯ ಮುಗಿದ 40 ನಿಮಿಷಗಳ ನಂತರ, ಸೈಕಿಯಾ ಮತ್ತು ಶುಕ್ಲಾ ಭಾರತೀಯ ತಂಡವನ್ನು ಉದ್ದೇಶಿಸಿ ಮಾತನಾಡಿದರೂ, ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾದಾಗ ಭಾರತೀಯ ಮಹಿಳಾ ಆಟಗಾರ್ತಿಯರು ಮೈದಾನದಲ್ಲಿ ಇರಲಿಲ್ಲ.
ಶ್ರೀಲಂಕಾ ಆಟಗಾರ್ತಿಯರು ರನ್ನರ್-ಅಪ್ ಪದಕಗಳನ್ನು ಸ್ವೀಕರಿಸಿದ ನಂತರ, ಭಾರತವು ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿದ್ದರಿಂದ ನಿರೂಪಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಟ್ರೋಫಿ ಕೊಡಿಸುವಂತೆ ಭಾರತ ಮನವಿ ಮಾಡಿತ್ತು. ಆದರೆ ನಖ್ವಿ ತಾವೇ ಟ್ರೋಫಿ ನೀಡುವುದಾಗಿ ಪಟ್ಟು ಹಿಡಿದರು. ನಖ್ವಿ ಮೊಂಡುತನಕ್ಕೆ ಸೆಡ್ಡು ಹೊಡೆದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವೇದಿಕೆಗೆ ಬಾರದೆ ಡ್ರೆಸ್ಸಿಂಗ್ ರೂಮ್ನಲ್ಲೇ ಉಳಿದುಕೊಂಡಿತು.
ಸಮಾರಂಭ ಮುಗಿದು ಎಲ್ಲರೂ ನಿರ್ಗಮಿಸಿದ ನಂತರ, ಭಾರತ ತಂಡದ ಆಟಗಾರ್ತಿಯರು ಮತ್ತು ಕೋಚಿಂಗ್ ಸ್ಟಾಫ್ ಖಾಲಿ ಸ್ಟೇಡಿಯಂನಲ್ಲಿ ಒಟ್ಟಿಗೆ ನಿಂತು ಗ್ರೂಪ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಸಾಮಾನ್ಯವಾಗಿ ಪ್ರಶಸ್ತಿ ವಿತರಣೆಯ ಕೊನೆಯಲ್ಲಿ ವಿಜೇತ ನಾಯಕಿಯ ಸಂದರ್ಶನ ನಡೆಯುತ್ತದೆ. ಆದರೆ ಬ್ರಾಡ್ಕಾಸ್ಟರ್ಗಳು ಪಂದ್ಯ ಮುಗಿದ ತಕ್ಷಣವೇ ಹರ್ಮನ್ ಪ್ರೀತ್ ಸಂದರ್ಶನ ಮಾಡಿ ಮುಗಿಸಿದ್ದರು. ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ಅಧಿಕೃತ ನಿಲುವು ಎಂದು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ.
ಪಹಲ್ಗಮ್ ಭಯೋತ್ಪಾದಕ ದಾಳಿ ಮತ್ತು ಗಡಿ ಸಂಘರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಪುರುಷರ ತಂಡಗಳು ಮುಖಾಮುಖಿಯಾದಾಗ ಈ ಬೆಳವಣಿಗೆಗಳು ಆರಂಭವಾಗಿದ್ದವು. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಪಾಕಿಸ್ತಾನದ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿತ್ತು ಮತ್ತು ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಿರಲಿಲ್ಲ. ಆ ಟ್ರೋಫಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಇನ್ನೂ ಹಸ್ತಾಂತರಿಸಿಲ್ಲ, ಈಗ ಮಹಿಳಾ ಏಷ್ಯಾ ಕಪ್ನ ವಿಷಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದಕ್ಕೂ ಮುನ್ನ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಭಾರತ 72 ರನ್ಗಳಿಂದ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ 8ನೇ ಬಾರಿಗೆ ಟ್ರೋಫಿ ಗೆದ್ದಿತು.