ಗಾಯಗೊಂಡ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬದಲಿಗೆ 2026ರ ಏಷ್ಯನ್ ಗೇಮ್ಸ್ಗಾಗಿ ಭಾರತದ ತಂಡದಲ್ಲಿ ಆಲ್ರೌಂಡರ್ ವಿಪ್ರಜ್ ನಿಗಮ್ ಅವರನ್ನು ಆಯ್ಕೆ ಮಾಡಿರುವ ಕ್ರಮವನ್ನು ಭಾರತದ ಮಾಜಿ ಆರಂಭಿಕ ಆಟಗಾರ ಕ್ರಿಸ್ ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ 35 ವರ್ಷದ ವರುಣ್, ಸರಣಿಯ ಉಳಿದ ಎರಡು ಪಂದ್ಯಗಳು ಹಾಗೂ ಮುಂಬರುವ ಏಷ್ಯನ್ ಗೇಮ್ಸ್ನಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ, 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಚೊಚ್ಚಲ ಐಪಿಎಲ್ ಅಭಿಯಾನದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ವಿಪ್ರಜ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ವಿಪ್ರಜ್ 180ರ ಸ್ಟ್ರೈಕ್ ರೇಟ್ನೊಂದಿಗೆ 142 ರನ್ಗಳನ್ನು ಗಳಿಸಿದರು ಮತ್ತು 14 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದರು. ಆದಾಗ್ಯೂ, 2026ರಲ್ಲಿ ಅವರ ಪ್ರದರ್ಶನ ಕುಸಿತ ಕಂಡಿತು; ಆ ವರ್ಷ ಅವರು ಕೇವಲ ಐದು ಪಂದ್ಯಗಳಲ್ಲಿ ಆಡಿ, 15 ರನ್ ಗಳಿಸಿದರು ಮತ್ತು ಕೇವಲ ಎರಡು ವಿಕೆಟ್ಗಳನ್ನು ಪಡೆದರು.
'ಯಾವುದೇ ಮುನ್ಸೂಚನೆಯಿಲ್ಲದೆ ವಿಪ್ರಜ್ ನಿಗಮ್ ತಂಡಕ್ಕೆ ಹೇಗೆ ಸೇರ್ಪಡೆಗೊಂಡರು? ಅವರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ? ವರುಣ್ ಚಕ್ರವರ್ತಿ ಅವರ ಸ್ಥಾನವನ್ನು ತುಂಬಬಲ್ಲಷ್ಟು ಶ್ರೇಷ್ಠ ಬೌಲರ್ ಅವರೇ? ಹೀಗೆ ಎಲ್ಲರಿಗೂ ಭಾರತ ತಂಡದ ಕ್ಯಾಪ್ ನೀಡಲು ಸಾಧ್ಯವಿಲ್ಲ. ಇದು ನೋಡಿದರೆ ಭಾರತ ತಂಡದ ಕ್ಯಾಪ್ ಅನ್ನು ಅಂಗಡಿಯಲ್ಲಿ ಖರೀದಿಸಬಹುದಾದಷ್ಟು ಸುಲಭದ ವಿಷಯ ಎಂಬಂತಿದೆ' ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ಪಂದ್ಯ-ಗೆಲ್ಲುವಂತಹ ಹಲವು ಪ್ರದರ್ಶನಗಳನ್ನು ನೀಡಿದ್ದರೂ ಸಹ, ಕೃನಾಲ್ ಪಾಂಡ್ಯ, ರಜತ್ ಪಾಟೀದಾರ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ನಿರಂತರವಾಗಿ ಹೊರಗಿಟ್ಟಿರುವುದನ್ನು 1983ರ ವಿಶ್ವಕಪ್ ವಿಜೇತ ಆಟಗಾರ ಪ್ರಶ್ನಿಸಿದ್ದಾರೆ.
'ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಜೀವನದಲ್ಲಿ ಅಂಥದ್ದೇನು ತಪ್ಪು ಮಾಡಿದ್ದಾರೆ? ಇವರಲ್ಲಿ ಕೆಲವರ ಆಯ್ಕೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ವಿಷಯದಲ್ಲಿ ಕಾಣುವಂತೆ, ಕೇವಲ ವಯಸ್ಸನ್ನು ಮಾತ್ರವೇ ಆಯ್ಕೆಗೆ ಮಾನದಂಡವನ್ನಾಗಿ ಮಾಡಿಕೊಳ್ಳಬಾರದು. ಸಾಮರ್ಥ್ಯ ಮತ್ತು ಪ್ರದರ್ಶನವೂ ಕೂಡ ಮುಖ್ಯ' ಎಂದು ಶ್ರೀಕಾಂತ್ ಹೇಳಿದರು.
'ಯುವ ಆಟಗಾರರು ತಮ್ಮ ಉತ್ತಮ ಪ್ರದರ್ಶನದ ಮೂಲಕ ಇವರನ್ನು ಹಿಂದಿಕ್ಕಿ ತಂಡದಲ್ಲಿ ಸ್ಥಾನ ಪಡೆಯಬೇಕು. ಆದರೆ, ಯಶ್ ಠಾಕೂರ್ ಅಥವಾ ರವಿ ಬಿಷ್ಣೋಯ್ ತಮ್ಮ ಪ್ರದರ್ಶನದ ಮೂಲಕ ಹಾಗೆ ಏನಾದರೂ ಸಾಧಿಸಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಇವರು ಐಪಿಎಲ್ ತಂಡಗಳ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲೂ ಅರ್ಹರಲ್ಲ' ಎಂದು ಅವರು ಸೇರಿಸಿದರು.
ಜಪಾನ್ನ ನಗೋಯಾದಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಕ್ವಾರ್ಟರ್ಫೈನಲ್ ಹಂತದೊಂದಿಗೆ ಭಾರತದ 2026ರ ಏಷ್ಯನ್ ಗೇಮ್ಸ್ ಅಭಿಯಾನವು ಆರಂಭವಾಗಲಿದೆ.