ಬಳ್ಳಾರಿ: ಹುಟ್ಟಿದ ಕೂಡಲೇ ಮಗು ಅಳಲಿಲ್ಲ ಎಂಬ ಕಾರಣದಿಂದ ನವಜಾತ ಶಿಶುವಿಗೆ ಏಳೆಂಟು ಕಡೆ ಬರೆ ಹಾಕಲಾಗಿದ್ದು, ತೀವ್ರ ಅಸ್ವಸ್ಥಗೊಂಡ ಶಿಶುವನ್ನು ಇಲ್ಲಿನ ವಿಮ್ಸ್ಗೆ ದಾಖಲು ಮಾಡಲಾಗಿದೆ.
ವಾರದ ಹಿಂದೆ ತಾಲೂಕಿನ ಹರಗಿನದೋಣಿ ನಿವಾಸಿ ನೀಲಮ್ಮ ಎಂಬುವವರಿಗೆ ಜನಿಸಿದ್ದ ಗಂಡು ಮಗು ಹುಟ್ಟಿದ್ದ ಕೂಡಲೇ ಅಳಲಿಲ್ಲ ಎಂಬ ಕಾರಣಕ್ಕೆ ಸೂಜಿಯನ್ನು ಬಿಸಿ ಮಾಡಿ ಬರೆ ಹಾಕಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಟ್ಟ ಗಾಯಗಳಿಂದಾಗಿ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದಿದ್ದು, ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿದೆ.
ನವಜಾತ ಶಿಶು ಹುಟ್ಟಿದಾಗ ಅಳಲಿಲ್ಲ. ಹಾಗಾಗಿ, ಮಗು ಚುರುಕಾಗಿಲ್ಲ. ಯಾವುದೋ ದುಷ್ಟಶಕ್ತಿಯ ಕಾಟವಿದೆ. ಕಾದ ಸೂಜಿಯಿಂದ ದೇಹದ ಮೇಲೆ ಬರೆ ಹಾಕಿದರೆ ದುಷ್ಟಶಕ್ತಿ ದೂರವಾಗಿ, ಮಗು ಸರಿಹೋಗುತ್ತದೆ ಎಂಬ ಮೂಢನಂಬಿಕೆಯಿಂದ ಪೋಷಕರು ಅಮಾನುಷವಾಗಿ ಬರೆ ಹಾಕಿದ್ದಾರೆ.