ಜಿಲ್ಲಾ ಸುದ್ದಿ

ಕಟ್ಟಡದಿಂದ ಬಿದ್ದು ಎಂಜಿನಿಯರ್ ಸಾವು

Shilpa D

ಬೆಂಗಳೂರು: ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದ ಐದನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಜೆಕ್ಟ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ಕೊತ್ತನೂರು ಬಳಿಯ ನಾಗವಾರ ಮುಖ್ಯರಸ್ತೆಯಲ್ಲಿ ಶನಿವಾರ ನಡೆದಿದೆ. ರಾಮಮೂರ್ತಿ ನಗರದ ನಿವಾಸಿ ಮೋಹನ್ ಕುಮಾರ್ (28) ಮೃತರು. ನಾಗವಾರ ಮುಖ್ಯರಸ್ತೆಯಲ್ಲಿ ಭಾರತಿ ಸಿಟಿ ಆವರಣದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಮೋಹನ್ ಕುಮಾರ್ ಕೆಲಸ ಮಾಡುವಾಗ ಕಟ್ಟಡದ 5ನೇ ಮಹಡಿಯಿಂದ ಆಯ ತಪ್ಪಿ ಕೆಳಗೆ ಬಿದ್ದರು. ಸ್ಥಳದಲ್ಲಿದ್ದ ಕಾರ್ಮಿಕರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಮೋಹನ್ ತಿಪಟೂರು ಮೂಲದವರಾಗಿದ್ದು ಭಾರತಿ ಕನ್‍ಸ್ಟ್ರಕ್ಷನ್ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಅವರು, ಕುಟುಂಬದೊಂದಿಗೆ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ಘಟನೆ ಸಂಬಂಧ ಭಾರತಿ ಸಂಸ್ಥೆಯ ವ್ಯವಸ್ಥಾಪಕ, ಭದ್ರತಾ ವಿಭಾಗದ ಎಂಜಿನಿಯರ್ ಸೇರಿದಂತೆ ನಿರ್ಲಕ್ಷ್ಯತನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊತ್ತನೂರು ಠಾಣೆ ಪೊಲೀಸರು ಹೇಳಿದ್ದಾರೆ.

SCROLL FOR NEXT