ಬೆಂಗಳೂರು: 2015--16ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿರುವ ಕಬ್ಬಿಗೆ ಎಫ್ಆರ್ಪಿ ನೀಡಲು ಕಾರ್ಖಾನೆಗಳು ವಿಳಂಬ ನೀತಿ ಅನುಸರಿಸುತ್ತಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಈ ತಿಂಗಳ ಅಂತ್ಯದೊಳಗೆ ಬೆಲೆ ಕೊಡಿಸಿಕೊಡಬೇಕು. ಇಲ್ಲದಿದ್ದರೆ ಆಯಾ ಸಕ್ಕರೆ ಕಾರ್ಖಾನೆಗಳ ಮುಂದೆ ವಸೂಲಿ ಚಳವಳಿ ನಡೆಸಲಾಗುವುದೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಮಂಗಳವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ ಶಾಂತಕುಮಾರ್, ಕಳೆದ 3 ತಿಂಗಳ ಹಿಂದೆಯೇ ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದಾರೆ.
ಮಂಡ್ಯ ಹೊರತು ಪಡಿಸಿ 64 ಕಾರ್ಖಾನೆಗಳಲ್ಲಿ ಕಬ್ಬು ಅರೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ರು. 2300 (9.5 ಇಳುವರಿ ಇರುವ ಕಬ್ಬು) ಹಾಗೂ ಬೆಳಗಾವಿಯ ವೆಂಕಟೇಶ್ವರ ಕಾರ್ಖಾನೆಗೆ ಸಾಗಿಸಿರುವ ಕಬ್ಬಿಗೆ ಮಾತ್ರ ರು. 3090 (12.80 ಇಳುವರಿ ಇರುವ ಕಬ್ಬು) ಎಫ್ ಆರ್ ಪಿ ಬೆಲೆ ನಿಗದಿಪಡಿಸಿದ್ದರೂ ಸಹ ರೈತರಿಗೆ ಮಾತ್ರ ರು. 1500 ನೀಡಿ ಬಾಕಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಒಂದು ಟನ್ ಕಬ್ಬಿನಿಂದ ರು. 3000 ರಂತೆ 4.30 ಕೋಟಿ ಟನ್ ಕಬ್ಬಿನಿಂದ ರು. 17 ಸಾವಿರಕೋಟಿ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಲು ಸರ್ಕಾರ ತಿಣುಕಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಐದು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸಿಕೊಡುವಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಈ ಬಗ್ಗೆ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರಿಗೆ ದೂರು ನೀಡಿದ್ದೇವೆ. ಸರ್ಕಾರದ ನಡುವಿನ ತಿಕ್ಕಾಟದಿಂದ ವಿಚಾರಣೆಯೇ ನಡೆಯುತ್ತಿಲ್ಲ.
ಕುರುಬೂರು ಶಾಂತಕುಮಾರ್, ರೈತ ಹೋರಾಟಗಾರ