ಜಿಲ್ಲಾ ಸುದ್ದಿ

ನಗರಕ್ಕೂ ನಿಸರ್ಗಕ್ಕೂ ಹೊಂದಾಣಿಕೆ ಬೇಕು: ಎ.ಎನ್. ಯಲ್ಲಪ್ಪರೆಡ್ಡಿ

Manjula VN

ಬೆಂಗಳೂರು: ನಗರಗಳು ಎಂದರೆ ಕೇವಲ ಕಟ್ಟಡಗಳು, ವಾಹನಗಳು, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳು ಮಾತ್ರವಲ್ಲ. ಅಲ್ಲಿ ನಿಸರ್ಗದ ಹೊಂದಾಣಿಯೂ ಇರಬೇಕು ಎಂದು ಹಿರಿಯ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಲಾಲ್‍ಬಾಗ್‍ನ ತೋಟಗಾರಿಕಾ ಮಾಹಿತಿ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆ ಮತ್ತು ಮೈಸೂರು
ತೋಟಗಾರಿಕೆ ಸೊಸೈಟಿ ಆಯೋಜಿಸಿದ್ದ ಜಿ.ಎಚ್. ಕುಂಬ್ರಿಗಲ್‍ರ 150ನೆ ಜನ್ಮದಿನಾಚರಣೆ' ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಿಸರ್ಗದ ಎಲ್ಲ ಅಂಶಗಳೆಂದರೆ ಮರ-ಗಿಡ, ಕಲ್ಲು, ಜೀವ ಸಂಕುಲಗಳನ್ನು ಕ್ರೋಢೀಕರಿಸಿಕೊಂಡು ನಗರಗಳ ನಿರ್ಮಾಣಕ್ಕೆ ಮುಂದುವರೆಯಬೇಕು. ಇಲ್ಲವಾದಲ್ಲಿ ಮನುಷ್ಯ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.

ಮನುಷ್ಯನಿಗೆ ಔಷಧ-ಆರೋಗ್ಯದೊಂದಿಗೆ ಉಲ್ಲಾಸವೂ ಬೇಕಾಗುತ್ತದೆ. ಉಲ್ಲಾಸವೆಂಬುದು ಮೆದುಳಿಗೆ ಬೇಕಾದ ಔಷಧವಾಗಿದ್ದು, ಉದ್ಯಾನಗಳಲ್ಲಿ ಸುತ್ತಾಡಿದಾಗ ಉಲ್ಲಾಸ ದೊರೆಯುತ್ತದೆ. ಇದರಿಂದ ಮನುಷ್ಯ ತನ್ನ ನೋವುಗಳು ಹಾಗೂ ಒತ್ತಡಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಿಸರ್ಗದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ಹಲವಾರು ನಗರಗಳಲ್ಲಿನ ಜನತೆ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಸರದೊಂದಿಗೆ ಹೊಂದಾಣಿಕೆ ಬೇಕು ಎಂಬ ಚಿಂತನೆಯನ್ನು ಹಲವು ವರ್ಷಗಳ ಹಿಂದೆಯೇ ಕುಂಬ್ರಿಗಲ್ ಹೊಂದಿದ್ದರು. ಈ ಕಾರಣದಿಂದ ಅವರು ರಾಜ್ಯದ ಹಲವು ಭಾಗಗಳಲ್ಲಿ ಉದ್ಯಾನಗಳನ್ನು ಸ್ಥಾಪಿಸಿ ವಿನ್ಯಾಸಗೊಳಿಸಿದ್ದಾರೆ ಎಂದು ಸ್ಮರಿಸಿದರು.

ನಗರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಕುಂಬ್ರಿಗಲ್‍ನಂತಹ ಮಹಾನ್ ಪುರುಷನ ಬಗ್ಗೆ ಹಾಗೂ ಆತನ ಸಾಧನೆಗಳ ಕುರಿತು ಈವರೆಗೆ ಯಾರು ಚಿಂತನೆ ಹಾಗೂ ಅದನ್ನು ಗುರುತಿಸುವ ಕೆಲಸ ನಡೆದಿರಲಿಲ್ಲ. ಆ ಕಾರ್ಯ ಇಂದು ಆರಂಭವಾಗಿದ್ದು, ಕುಂಬ್ರಿಗಲ್ ಅವರ ಸಾಧನೆಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಜರ್ಮನಿ ಹಾಗೂ ಭಾರತ ದೇಶಗಳ ವಿಜ್ಞಾನಿಯಾಗಿದ್ದ ಅವರು 20ವರ್ಷಗಳ ಕಾಲ ರಾಜ್ಯದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಬೇರೆ ದೇಶದ ಪ್ರಜೆ ನಮ್ಮ ನಾಡಿನ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದರೆ, ನಮ್ಮ ನಾಡಿನ ಪರಿಸರ ಸಂರಕ್ಷಣೆಗೆ ನಾವು ಏಕೆ ಮುಂದಾಗಬಾರದು ಎಂದು ಪ್ರಶ್ನಿಸಿದರು.

ಕುಂಬ್ರಿಗಲ್‍ರನ್ನು ಯುವಕರ ಬಳಿಗೆ ತೆಗೆದುಕೊಂಡು ಹೋಗುವುದು ಅವಶ್ಯಕವಾಗಿದ್ದು, ಲಾಲ್‍ಬಾಗ್‍ಗೆ ಭೇಟಿ ನೀಡುವ 7 ರಿಂದ 9ನೇ ತರಗತಿಯ ಮಕ್ಕಳಿಗೆ ಕುಂಬ್ರಿಗಲ್ ಅವರ
ಸಾಧನೆಗಳ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಮಾತನಾಡಿದ ಜರ್ಮನ್‍ನ ಬೆಂಗಳೂರು ರಾಯಭಾರಿ ಜೊರೆನ್ ರೊಡೆ, ಬೆಂಗಳೂರು ಗಾರ್ಡನ್ ಸಿಟಿಯಾಗಿ ಹೆಸರು ಪಡೆಯುವಲ್ಲಿ ಜರ್ಮನಿಯ ವಿಜ್ಞಾನಿ ಕುಂಬ್ರಿಗಲ್‍ರ ಪಾತ್ರ ಪ್ರಮುಖವಾಗಿದ್ದು, ಅವರಿಂದ ಬಂದಂತಹ ಹೆಸರನ್ನು ಉಳಿಸಿಕೊಂಡು ಹೋಗುವ ಪ್ರಯತ್ನಗಳು ನಡೆಯಬೇಕಿದೆ. ಬೆಂಗಳೂರಿನ ಹಸಿರು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು, ನಗರದ ಉದ್ಯಾನಗಳನ್ನು ಉಳಿಸಿ ಬೆಳಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಮಾಜಿ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮಣಿ, ಜರ್ಮನಿಯ ವಿಜ್ಞಾನಿ ಡಾ.ಅಜ್ನಾ ಇಪೆರ್ಟ್, ಗ್ರೀನ್ ಹೆರಿಟೇಜ್ ವಾಕ್‍ನ ವಿಜಯ್ ತಿರುವಾಡಿ, ತೋಟಗಾರಿಕಾ ಇಲಾಖೆಯ ಮಾಜಿ ನಿರ್ದೇಶಕ ವಸಂತಕುಮಾರ್, ಮೈಸೂರು ತೋಟಗಾರಿಕೆ ಸೊಸೈಟಿಯ ಮುಖ್ಯಸ್ಥರಾದ ಎಸ್ .ಬಿ.ಬೊಮ್ಮನಹಳ್ಳಿ ಹಾಗೂ ಉಪಾಧ್ಯಕ್ಷ ಕಾಂತಯ್ಯ ಹಾಜರಿದ್ದರು.

SCROLL FOR NEXT