ಜಿಲ್ಲಾ ಸುದ್ದಿ

ಅಕಾಡೆಮಿಗೆ ವಿವಿಯಲ್ಲಿ ಜಾಗ: ಪ್ರೊ.ತಿಮ್ಮೇಗೌಡ

Manjula VN

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿಗೆ ಜ್ಞಾನಭಾರತಿ ಆವರಣದಲ್ಲಿ ಸೂಕ್ತ ಕಟ್ಟಡ ನೀಡುವ ಸಂಬಂಧ ಸಿಂಡಿಕೇಟ್ ಸಭೆಯ ಮುಂದಿಟ್ಟು ಚರ್ಚೆ ನಡೆಸುತ್ತೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹೇಳಿದರು.
.
ಬೆಂಗಳೂರು ವಿವಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಸಾಹಿತ್ಯ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತದ ದಲಿತ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಅಕಾಡೆಮಿಯ ಕಚೇರಿಯನ್ನು ವಿವಿ ಆವರಣದಲ್ಲಿ ಸ್ಥಾಪಿಸಲು ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದರೆ, ಉತ್ತಮ ಕಟ್ಟಡ ನೀಡಲಾಗುವುದು ಎಂದು ತಿಳಿಸಿದರು.

ದಲಿತ ಸಾಹಿತ್ಯ ಕುರಿತು ಮಾತನಾಡಿದ ಕುಲಪತಿಯವರು, ದಲಿತ ಸಾಹಿತ್ಯ ದಿಂದ ಸಾಕಷ್ಟು ಪ್ರತಿಭೆಗಳು ಹೊರಹೊಮ್ಮುತ್ತಾರೆ. ಈ ಕ್ಷೇತ್ರವನ್ನು ಮತ್ತಷ್ಟು
ಬೆಳೆಸುವ ಅಗತ್ಯವಿದೆ ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಮಾತನಾಡಿ, ಮೊದಲು ಭಾರತೀಯ ಯುವ ಸಾಹಿತಿಗಳು ಪಾಶ್ಚಾತ್ಯ ಬರಹಗಾರರು ನಮಗೆ ಸ್ಪೂರ್ತಿ ಎನ್ನುತ್ತಿದ್ದರು. ಆದರೆ, ಕಳೆದ 2-3 ವರ್ಷಗಳ ಯುವ ಬರಹಗಾರರು ದೇಶಿಯ ಸಾಹಿತಿಗಳಿಂದ ಸ್ಪೂರ್ತಿ ಪಡೆದಿದ್ದೇವೆ ಎಂದು ಹೇಳುವಾಗ ನಿಜಕ್ಕೂ ಖುಷಿಯಾಯಿತು. ಸ್ವತಂತ್ರವಾಗಿ ನಮ್ಮ ಯುವಕರು ಯೋಚನೆ ಮಾಡುತ್ತಿದ್ದಾರೆ ಎಂಬುದು ನಿಜಕ್ಕೂ ಶ್ಲಾಘನೀಯ ಎಂದರು.

ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರಿಂದ ಎರಡು ಕ್ರಾಂತಿಗಳು ನಡೆದವು. ಒಂದು ವೃತ್ತಿ ಚಳವಳಿ, ಮತ್ತೊಂದು ಎಲ್ಲರಿಗೂ ಅಕ್ಷರ ಕಲಿಸುವುದು. ಇದರಿಂದ ದಲಿತರು ಹಾಗೂ ಬಡವರ ಎದೆಗೆ ಅಕ್ಷರ ಬಿದ್ದವು. ಅದರಲ್ಲೂ ಮಹಿಳೆಯರು ಹೆಚ್ಚು ವಿದ್ಯಾವಂತರಾದರು. ಆತ್ಮಚರಿತ್ರೆಗಳನ್ನು ಬರೆಯಲು ಪ್ರಾರಂಭಿಸಿದರು. ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಬರೆದರು. ಇದು ಮಹಾರಾಷ್ಟ್ರದಲ್ಲಿ ದೊಡ್ಡ ಆಂದೋಲನವಾಯಿತು. ಈ ರೀತಿಯ ಚಳವಳಿಯನ್ನು ಕನ್ನಡದಲ್ಲಿ ತಂದಿದ್ದು ನಾನು ಎಂದರು. ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು
ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಮತ್ತು ವಿವಿಯ ಕುಲಸಚಿವೆ ಪ್ರೊ. ಕೆ.ಕೆ. ಸೀತಮ್ಮ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಮಹಾಲಿಂಗೇಶ್ವರ್ ಭಟ್, ಕನ್ನಡ ಸಲಹಾ ಮಂಡಳಿ, ಸಾಹಿತ್ಯ ಅಕಾಡಮೆಯ ಸಂಚಾಲಕ ಡಾ.ನರಹಳ್ಳಿ  ಬಾಲಸುಬ್ರಹ್ಮಣ್ಯ ಹಾಗೂ ಲೇಖಕಿ ಡಾ.ಶಾರದಾ ಇತರರು ಇದ್ದರು.

SCROLL FOR NEXT