ಬೆಂಗಳೂರು: ಬಸವಣ್ಣ ಹಾಗೂ ಕನಕದಾಸರು ಸೇರಿದಂತೆ ನಾಡಿನ ಶ್ರೇಷ್ಠ ವ್ಯಕ್ತಿಗಳ ಹೆಸರಿನಲ್ಲಿರುವ ಪ್ರಶಸ್ತಿಗಳನ್ನು ಮುಂದಿನ ವರ್ಷದಿಂದ ಆಯಾ ವ್ಯಕ್ತಿಗಳ ಜಯಂತ್ಯುತ್ಸವದ ಸಂದರ್ಭದಲ್ಲಿಯೇ ಸಾಧಕರಿಗೆ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರದ ಸಂಸ ಬಯಲು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 2013ನೇ ಸಾಲಿನ ನಾನಾ ಗೌರವ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಬಸವ, ಕನಕ ಹಾಗೂ ಸಂಗೊಳ್ಳಿ ರಾಯಣ್ಣ ಸೇರಿದಂತೆ ನಾಡಿನ ಅನೇಕ ಶ್ರೇಷ್ಠ ಸಂತರ ಹೆಸರಲ್ಲಿ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡುತ್ತ ಬರಲಾಗುತ್ತಿದೆ. ಮುಂದಿನ ವರ್ಷದಿಂದ ಈ ಪ್ರಶಸ್ತಿಗಳನ್ನು ಆಯಾ ವ್ಯಕ್ತಿಗಳ ಜಯಂತ್ಯುತ್ಸವ ಸಂದರ್ಭದಲ್ಲಿಯೇ ಸಾಧಕರಿಗೆ ಪ್ರದಾನ ಮಾಡಲಾಗುವುದು ಎಂದರು.
ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈ ಬಾರಿ ಬನವಾಸಿಯಲ್ಲಿಯೇ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಎಲ್ಲ ಕಾರ್ಯಗಳಿಗೂ ಸರಕಾರ ಆರ್ಥಿಕ ನೆರವು ನೀಡಲಿದೆ. ಹಾಗೆಯೇ ಕನ್ನಡದ ಸಾಧಕರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಇಲಾಖೆ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಕಾಲೇಜು ರಂಗೋತ್ಸವದ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಕಲೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಇದರಿಂದ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಆಗಲಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಹಿರಿಯ ಸಾಹಿತಿ ಡಾ. ಎಂ.ಎಂ.ಕಲ್ಬುರ್ಗಿ ಮಾತನಾಡಿದರು. ರಾಜ್ಯದಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವವರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಇದಕ್ಕೆ ಸೂಕ್ತ ಸಹಕಾರ ಸಿಗದಿರುವುದೇ ಮುಖ್ಯವಾಗಿದೆ. ಕುವೆಂಪು ಹಾಗೂ ಬೇಂದ್ರೆಯವರು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಅರ್ಹರಿದ್ದರೂ ಅವರಿಗೆ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ, ನಿರ್ದೇಶಕ ಕೆ.ಎ.ದಯಾನಂದ ಉಪಸ್ಥಿತರಿದ್ದರು.
ಗೌರವ ಪ್ರಶಸ್ತಿ ಪುರಸ್ಕೃತರು
ಬಸವ ರಾಷ್ಟ್ರೀಯ ಪುರಸ್ಕಾರ- ಡಾ. ಎಂ.ಎಂ. ಕಲಬುರ್ಗಿ
ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ -ಪಂಡಿತ್ ರಾಮನಾರಾಯಣ್
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ. ಎಂ.ಸರಸ್ವತಿ ಗೌಡ
ನಿಜಗುಣ ಪುರಂದರ ಪ್ರಶಸ್ತಿ - ರಾಜಲಕ್ಷ್ಮೀ ತಿರುನಾರಾಯಣ
ಸಂತ ಶಿಶುನಾಳ ಷರೀಫ ಪ್ರಶಸ್ತಿ - ಎಸ್.ಕೆ. ವಸುಮತಿ
ಶಾಂತಲಾ ನಾಟ್ಯ ಪ್ರಶಸ್ತಿ - ಪದ್ಮಿನಿ ರಾಮಚಂದ್ರನ್
ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ-ಫಕೀರಪ್ಪ ವರವಿ
ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿ-ಕೆ.ಟಿ. ಶಿವಪ್ರಸಾದ್
ಜಕಣಾಚಾರಿ ಪ್ರಶಸ್ತಿ- ಬಸಣ್ಣ ಮೋನಪ್ಪ ಬಡಿಗೇರ
ಜಾನಪದಶ್ರೀ ಪ್ರಶಸ್ತಿ - ಮುಖವೀಣೆ ಆಂಜನಪ್ಪ
ಪ್ರೊ.. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ- ಡಾ. ಮ.ಗು.ಬಿರಾದಾರ
ಕುಮಾರ ವ್ಯಾಸ ಪ್ರಶಸ್ತಿ- ಬಾಲಚಂದ್ರ ಶಾಸ್ತ್ರಿ ಹಿರೇಮಠ.