ಜಿಲ್ಲಾ ಸುದ್ದಿ

ಕೊಲೆ ಆರೋಪಿಗಳ ಸೆರೆ

ಬೆಂಗಳೂರು: ಕೆಲ ದಿನಗಳ ಹಿಂದೆ ನಡೆದಿದ್ದ ಫೈನಾನ್ಸ್ ಕಂಪನಿ ಉದ್ಯೋಗಿ ಅಮೂಲ್ ಕೃಷ್ಣನ್(27) ಕೊಲೆ ಪ್ರಕರಣದ ಸಂಬಂಧ ರಾಮಮೂರ್ತಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಜಾರ ಲೇಔಟ್ ಓಂಶಕ್ತಿ ದೇವಸ್ಥಾನ ರಸ್ತೆ ನಿವಾಸಿ ದಿಲೀಪ್‍ಕುಮಾರ್(23) ಹಾಗೂ ಸ್ನೇಹಿತ ಜೀವನಹಳ್ಳಿ ಐಟಿಸಿ ಕಾಲೊನಿಯ ಕಮಲ್(20) ಬಂಧಿತರು. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು ಅವರ ಪತ್ತೆಕಾರ್ಯ ನಡೆದಿದೆ. ದಿಲೀಪ್ ಮತ್ತು ಅಮೂಲ್ ಇಬ್ಬರೂ ಪದವಿ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟಿದ್ದರು. ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಹಾಗಾಗಿ ಆಗಾಗ ಕಾಲೇಜು ಬಳಿ ಬರುತ್ತಿದ್ದರು. ಇಬ್ಬರೂ ಪ್ರತ್ಯೇಕ ಹುಡುಗರ ತಂಡಗಳನ್ನು ನಿರ್ವಹಿಸುತ್ತಿದ್ದರು.

ಎರಡೂ ತಂಡಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರಕ್ಕೆ ಕಳೆದ ವಾರ ಕೊಲೆಯಾದ ಅಮೂಲ್ ತನ್ನ ಸಹಚರರ ಜತೆ ಸೇರಿ ದಿಲೀಪ್ ಮೇಲೆ ಹಲ್ಲೆ ಮಾಡಿದ್ದ. ಕೆಲ ರಾಜಕೀಯ ಮುಖಂಡರು ಇಬ್ಬರ ನಡುವೆ ಸಂಧಾನ ಮಾಡಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT