ಜಿಲ್ಲಾ ಸುದ್ದಿ

ಕಿಮ್ಸ್ ನಲ್ಲಿ ನವಜಾತ ಶಿಶು ಸಾವು ನಾಲ್ಕಕ್ಕೇರಿಕೆ: ಹೆಚ್ಚಿದ ಆತಂಕ

Srinivas Rao BV

ಬೆಂಗಳೂರು:  ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ನಲ್ಲಿ ಸತ್ತಿರುವ ನವಜಾತ ಶಿಶುಗಳ ಸಂಖ್ಯೆ 4 ಕ್ಕೇರಿದೆ. ಇದು ದಾಖಲಾಗಿರುವ ಬಾಣಂತಿಯರು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಶಿಶುಗಳ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕೆ.ಸಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಂ ವಾಮದೇವ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರ ಜತೆಗೆ ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ತನಿಖಾ ತಂಡದಲ್ಲಿದ್ದಾರೆ. ಸೋಮವಾರದೊಳಗೆ ಪ್ರಕರಣದ ಬಗ್ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಯಳಚೆನಹಳ್ಳಿ ನಿವಾಸಿ ಮಂಜುನಾಥ ದಾಕ್ಷಾಯಿಣಿ ದಂಪತಿ ಮತ್ತು ಮಾಗಡಿಯ ಹರೀಶ್- ಲಕ್ಷ್ಮಿ ದಂಪತಿ ಶಿಶುಗಳು ಮೃತಪಟ್ಟಿದ್ದವು. ಯಲಹಂಕ ನಿವಾಸಿ ರಾಜೇಶ್- ರೇಖಾ ದಂಪತಿ ಹಾಗೂ ದೇವರಾಜ್-  ಭಾಗ್ಯಲಕ್ಷ್ಮಿ ದಂಪತಿ ಶಿಶುಗಳು ಮೃತಪಟ್ಟಿವೆ.  

ಆಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ್ದರಿಂದ ಶಿಶುಗಳ ಸಾವು ಸಂಭವಿಸಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಆದರೆ ಪಾಲಕರ ಆರೋಪವನ್ನು ತಳ್ಳಿಹಾಕಿರುವ ಆಸ್ಪತ್ರೆ ಸಿಬ್ಬಂದಿಗಳು ವಿವಿಧ ಸೋಂಕುಗಳು ಹಾಗೂ ಜನನಪೂರ್ವ ನ್ಯೂನತೆಗಳಿಂದ ಕಾಯಿಲೆಗೆ ತುತ್ತಾಗಿ ಶಿಶುಗಳು ಸಹಜ ಸಾವನ್ನಪ್ಪಿವೆ ಎಂದು ಹೇಳಿಕೆ ನೀಡಿದ್ದಾರೆ. ಆದರೂ 4 ಶಿಶುಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

SCROLL FOR NEXT