ಜಿಲ್ಲಾ ಸುದ್ದಿ

ವಜ್ರೇಶ್ವರಿ ಕಂಬೈನ್ಸ್ ನ ಅಕೌಂಟೆಂಟ್ ಆತ್ಮಹತ್ಯೆ

Mainashree

ಬೆಂಗಳೂರು: ಚಲನಚಿತ್ರ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ನ ಅಕೌಂಟೆಂಟ್‍ವೊಬ್ಬರು ಕಾಟನ್‍ಪೇಟೆಯ ಲಾಡ್ಜ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತ್ಯಾಗರಾಜನಗರ ಸಮೀಪದ ನಾಗಸಂದ್ರ ನಿವಾಸಿ ಉಮೇಶ್ (47) ಮೃತರು. ಮಂಗಳವಾರ ಕಾಟನ್‍ಪೇಟೆ ಮುಖ್ಯರಸ್ತೆಯ ಮಂಜುನಾಥ ಪ್ಯಾರಡೈಸ್ ಲಾಡ್ಜ್ ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ ಉಮೇಶ್, ಗುರುವಾರ ರಾತ್ರಿ 7 ಗಂಟೆಯಾದರೂ ಕೊಠಡಿಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಲಾಡ್ಜ್‍ಗೆ ತೆರಳಿದ ಪೊಲೀಸರು, ಉಮೇಶ್ ತಂಗಿದ್ದ ಕೊಠಡಿ ಕಿಟಕಿ ತೆರೆದು ನೋಡಿದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ ಉಮೇಶ್ ಉಡುಪಿ ಜಿಲ್ಲೆಯವರಾಗಿದ್ದು, ತಮ್ಮ ಪತ್ನಿ ಮತ್ತು ಮಗನ ಜತೆ ತ್ಯಾಗರಾಜನಗರ ಬಳಿಯ ನಾಗಸಂದ್ರದಲ್ಲಿ ವಾಸವಾಗಿದ್ದರು. 20ಕ್ಕೂ ಹೆಚ್ಚು ವರ್ಷಗಳಿಂದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಸಂಸ್ಥೆಯಲ್ಲಿ ಹಣ ದುರುಪಯೋಗವಾಗಿರುವ ವಿಷಯದ ಬಗ್ಗೆ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಉಮೇಶ್, ಮಂಗಳವಾರ ಎಂದಿನಂತೆ ಕಚೇರಿಗೆ ಹೋಗುವುದಾಗಿ ಮನೆಯಿಂದ ಹೋಗಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮೊಬೈಲ್ ಫೋನ್ ನಾಟ್ ರಿಚೇಬಲ್ ಆಗಿತ್ತು. ಕೊನೆಗೆ ಪೊಲೀಸರ ಮೂಲಕ ಗುರುವಾರ ಸಂಜೆ ಕುಟುಂಬ ಸದಸ್ಯರಿಗೆ ಮಾಹಿತಿ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT