ಜಿಲ್ಲಾ ಸುದ್ದಿ

ವೇತನ ಸರಿಯಾಗಿ ಸಿಗಲ್ಲ, ರಸ್ತೆ ಗುಡಿಸುವುದಕ್ಕೆ ಪೊರಕೆಯೇ ಇರಲ್ಲ: ಪೌರಕಾರ್ಮಿಕರ ಅಳಲು

Srinivas Rao BV

ಬೆಂಗಳೂರು: ಮಲ್ಲೇಶ್ವರದ ಪೈಪ್ ಲೈನ್ ರಸ್ತೆ ಬಳಿ ಪೌರಕಾರ್ಮಿಕರೊಂದಿಗೆ ಕಾಫಿ ಸಂವಾದ ನಡೆಸಿದ ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಅವರಿಗೆ ಸಮಸ್ಯೆಗಳ ಮಹಾಪೂರವೇ ಹರಿದುಬಂದಿದೆ.

ಪ್ರತಿ ತಿಂಗಳೂ ವೇತನ ತಡವಾಗುತ್ತಿರುವುದರಿಂದ ಮನೆ ಬಾಡಿಗೆ, ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲದ ಕಂತು ಕಟ್ಟುವುದು ತಡವಾಗುತ್ತಿದೆ ಪರಿಣಾಮ ಬಡ್ಡಿ ಬೆಳೆಯುತ್ತಿದೆ ಎಂದು ಪೌರಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇವಿಷ್ಟೂ ವೇತನ ತಡವಾಗುತ್ತಿರುವುದರಿಂದ  ಪೌರಕಾರ್ಮಿಕರು ಎದುರಿಸುತ್ತಿರುವ ವಯಕ್ತಿಕ ಸಮಸ್ಯೆಗಳಾದರೆ, ಬೆಳಿಗ್ಗೆ ಕಸ ಗುಡಿಸಲು ರಸ್ತೆಗಿಳಿದರೆ ಪೊರಕೆಯೇ ಇರುವುದಿಲ್ಲ ಎಂಬುದು ಪೌರಕಾರ್ಮಿಕರು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.

ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ವೇತನ,ಆರೋಗ್ಯ, ಕಸ ವಿಲೇವಾರಿಗೆ ಸಲಕರಣೆಗಳ ಲಭ್ಯತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೌರಕಾರ್ಮಿಕರ ಆರೋಗ್ಯದ ಬಗ್ಗೆಯೂ ಬಿಬಿಎಂಪಿ ನಿಗಾ ವಹಿಸಿದ್ದು   ಕಸ ವಿಲೇವಾರಿ ಮಾಡುವಾಗ ಕಡ್ಡಾಯವಾಗಿ ಕೈಗವುಸು, ಮುಖಗವುಸು, ಗಂಬೂಟ್ ಧರಿಸಿಯೇ ಕೆಲಸ ಮಾಡುವಂತೆ ಅಧಿಕಾರಿಗಳು ಕಾರ್ಮಿಕರಿಗೆ ತಿಳಿಸಬೇಕೆಂದು ಆಯುಕ್ತರು ಹೇಳಿದ್ದಾರೆ.   

ಇದೇ ವೇಳೆ ಗುತ್ತಿಗೆದಾರರೊಬ್ಬರ ಜೊತೆ ಮಾತನಾಡಿದ ಕುಮಾರ್ ನಾಯಕ್, 100 ಪೌರಕಾರ್ಮಿಕರಲ್ಲಿ ಕೆಲವರು ಆರೋಗ್ಯ ಸಮಸ್ಯೆಗಳಿಂದ ಗೈರುಹಾಜರಾದರೆ ವಿನಾಯಿತಿ ನೀಡಬಹುದು. ನಗರದಲ್ಲಿ ಕಸ ಹೆಚ್ಚಾಗುತ್ತಿದ್ದು ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಈರೀತಿಯಾಗುತ್ತಿದ್ದು ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.

   

SCROLL FOR NEXT