ಜಿಲ್ಲಾ ಸುದ್ದಿ

ಮೇ. 28 ರಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ

Srinivas Rao BV

ಮೈಸೂರು: ಯದುವಂಶದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕಕ್ಕೆ ಮೈಸೂರು ಅರಮನೆ ಸಜ್ಜುಗೊಳ್ಳುತ್ತಿದೆ.

ಮೇ.28 ರಂದು ಅರಮನೆಯಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದ್ದು, ಯದುವಂಶದ ಮಹಾರಾಜರಾಗಿ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ  ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು,  ಅಮರಮನೆಯನ್ನು ಶೃಂಗರಿಸಲಾಗುತ್ತಿದೆ. ಪಟ್ಟಾಭಿಷೇಕ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು ರಾಜಕಾರಣಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಮೀನಾಕ್ಷಿ ದೇವಿ ಇತ್ತೀಚೆಗಷ್ಟೇ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿರುವ ದಿನಾಂಕದ ಬಗ್ಗೆ ಕೆಲ ಗೊಂದಲ ಉಂಟಾಗಿತ್ತು. ಆದರೆ ಮೇ.28 ಕ್ಕೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುವುದು ಖಾತ್ರಿಯಾಗಿದೆ.

ಅಮೆರಿಕಾದ ಬೋಸ್ಟನ್ ವಿವಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪೂರೈಸಿರುವ ಮೈಸೂರು ರಾಜವಂಶದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒಂದು ವಾರದ ಹಿಂದಷ್ಟೆ ಮೈಸೂರಿಗೆ ಆಗಮಿಸಿದ್ದಾರೆ. 2015ರ ಫೆಬ್ರವರಿ 23ರಂದು ಯದುವೀರ್‌ ಅರಸ್ ದತ್ತು ಸ್ವೀಕಾರ ಸಮಾರಂಭ ನಡೆದಿತ್ತು. ಯದುವೀರ್ ಒಡೆಯರ್ ಅವರು ವಿದ್ಯಾಭ್ಯಾಸ ಪೂರೈಸಿ ಮೈಸೀರುಗೆ ವಾಪಸ್ಸಾದ ನಂತರ  ಮೇ ಅಂತ್ಯ ಅಥವಾ ಜೂನ್ ನಲ್ಲಿ  ಪಟ್ಟಾಭಿಷೇಕ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ ಎಂದು ದತ್ತು ಸ್ವೀಕಾರ ಸಮಾರಂಭದ ದಿನದಂದೇ ಪ್ರಮೋದಾ ದೇವಿ ಒಡೆಯರ್ ಪ್ರಕಟಿಸಿದ್ದರು.

SCROLL FOR NEXT