ಜಿಲ್ಲಾ ಸುದ್ದಿ

ಅಂತೂ ಇಂತೂ ಸಂಚಾರಿ ವಿಜಯ್‌ಗೆ ಸಿಎಂ ಅಭಿನಂದನೆಯ ಯೋಗ

Rashmi Kasaragodu

ಬೆಂಗಳೂರು: ಅಂತೂ ಇಂತೂ ಶ್ರೇಷ್ಠ ನಟ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವರನ್ನು ಸಿಎಂ ಅಭಿನಂದಿಸಿದ್ದಾರೆ. ಹೀಗೆ ಹೇಳುವುದಕ್ಕೂ ಕಾರಣವಿದೆ. ಮಾರ್ಚ್ 24ರಂದು ಪ್ರಶಸ್ತಿ ಪ್ರಕಟವಾಗಿತ್ತು, ಇದಾಗಿ ಬರೋಬ್ಬರಿ 2 ತಿಂಗಳುಗಳ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳಮುಖಿಯರ ಜೀವನ ಆಧಾರಿತ 'ನಾನು ಅವನಲ್ಲ ಅವಳು' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸಂಚಾರಿ ವಿಜಯ್ ಅವರು ಶ್ರೇಷ್ಠ ನಟನೆಗೆ 2014ನೇ ಸಾಲಿನ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದು, ವಿಧಾನಸೌಧದ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಸಿದ್ಧರಾಮಯ್ಯ ನಿನ್ನೆ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನಿಗೆ ಶುಭ ಹಾರೈಸಲು ಸಿಎಂಗೆ ಇಷ್ಟು ದಿನ ಬೇಕಾಗಿತ್ತಾ?

ಕನ್ನಡಪ್ರಭ ಡಾಟ್ ಕಾಂ ವರದಿ ಮಾಡಿತ್ತು: ಪ್ರಶಸ್ತಿ ಪ್ರಕಟವಾಗಿ ಒಂದು ತಿಂಗಳಾದರೂ ಸಿಎಂ ಅಭಿನಂದನೆ ಸಲ್ಲಿಸದೇ ಇದ್ದುದರ ಬಗ್ಗೆ ಏಪ್ರಿಲ್ 29 ರಂದು ಕನ್ನಡಪ್ರಭ ಡಾಟ್ ಕಾಂ ವರದಿ ಮಾಡಿತ್ತು.

ಇನ್ನುಳಿದವರಿಗೆ ಅಭಿನಂದನೆ ಸಲ್ಲಿಸುವುದು ಯಾವಾಗ?

ಸಂಚಾರಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾಯ್ತು.  ಆದರೆ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಮಂಸೋರೆ (ಶ್ರೇಷ್ಠ ಪ್ರಾದೇಶಿಕ ಚಿತ್ರ -'ಹರಿವು'  ನಿರ್ದೇಶಕರು), ಪ್ರಶಸ್ತಿ ವಿಜೇತ ಪ್ರಸಾಧನ ಕಲಾವಿದರಾದ ರಾಜು ಮತ್ತು ನಾಗರಾಜು ಅವರಿಗೆ ಸಿಎಂ ಅಭಿನಂದನೆ ಸಲ್ಲಿಸುವುದು ಯಾವಾಗ?

SCROLL FOR NEXT