ಬೆಂಗಳೂರು: ನಿರ್ಲಕ್ಷ್ಯದಿಂದಾಗಿ ವೈದ್ಯರ ಕೈ ತಪ್ಪಿ ಕೆಳಗೆ ಬಿದ್ದು ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪಾಲಕರು ಮತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರು ನಾಗವಾರದ ಜೆಎಂಜೆ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶ ಮೂಲದ ಪ್ರೀತಿ ಮತ್ತು ಬಬ್ಲುಕುಮಾರ್ ದಂಪತಿಯ ನವಜಾತ ಗಂಡು ಶಿಶು ಮೃತಪಟ್ಟಿದೆ. ನಾಗವಾರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಬಬ್ಲುಕುಮಾರ್, ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾರೆ. ಪತ್ನಿ ಪ್ರೀತಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಬುಧವಾರ ತಡರಾತ್ರಿ 2.30ರಲ್ಲಿ ನಾಗವಾರ ಜಂಕ್ಷನ್ನಲ್ಲಿರುವ ಜೆಎಂಜೆ ಆಸ್ಪತ್ರೆಗೆ ದಾಖಲಿಸಿದ್ದರು.
ತಪಾಸಣೆ ನಡೆಸಿದ ವೈದ್ಯರು, ಸಂಜೆ 4 ಗಂಟೆಗೆ ಹೆರಿಗೆಯಾಗುವುದಾಗಿ ಹೇಳಿದ್ದರು. ಅದರಂತೆ ಸಂಜೆ 4.30ಕ್ಕೆ ಹೆರಿಗೆಯಾಗಿದ್ದು ಗಂಡು ಮಗು ಜನಿಸಿತ್ತು. ಕೆಲ ಹೊತ್ತಿನಲ್ಲೇ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪಾಲಕರಿಗೆ ತೋರಿಸಿದ್ದರಂತೆ. ಆದರೆ, ಸಂಜೆ 6 ಗಂಟೆಗೆ ಶಿಶುವಿನ ಹೃದಯದಲ್ಲಿ ರಂಧ್ರ ಮತ್ತು ತಾಯಿ ಕರುಳಿಗೆ ಶಿಶು ಸುತ್ತಿಕೊಂಡಿದ್ದ ಕಾರಣ ಮಗು ಮೃತಪಟ್ಟಿದೆ. ಪ್ರೀತಿಗೆ ವಿಷಯ ತಿಳಿಸಿರಲಿಲ್ಲ.
ಗುರುವಾರ ಬೆಳಗ್ಗೆ ವಿಷಯ ತಿಳಿದು ಗಾಬರಿಗೊಂಡ ಪ್ರೀತಿ, ವೈದ್ಯರು ಪರೀಕ್ಷೆ ನಡೆಸುವಾಗ ಕೈ ತಪ್ಪಿ ಶಿಶು ಕೆಳಗೆ ಬಿದ್ದಿತ್ತು. ಇದೇ ಕಾರಣಕ್ಕೆ ಸಾವನ್ನಪ್ಪಿದೆ ಎಂದು ಪತಿಯ ಬಳಿ ಅಳಲು ತೋಡಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಬಬ್ಲುಕುಮಾರ್ ತನ್ನ ಸಂಬಂಧಿಕರು ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರೊಂದಿಗೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಗು ಸಾವಿಗೆ ನಿಖರ ಕಾರಣ ತಿಳಿಸಬೇಕು. ಅದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿದರು. ಈ ಸಂಬಂಧ ಕಾಡು ಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos