ಬೆಂಗಳೂರು: ಧಾರ್ಮಿಕ ಅಧ್ಯಯನಕ್ಕೆ ಸೀಮಿತವಾಗಿದ್ದ ಮದರಸಾಗಳಲ್ಲಿ ವಿಶ್ವ ಭಾತೃತ್ವ, ಸಾಮಾಜಿಕ ಬದ್ದತೆ ಹಾಗೂ ಸೇವಾ ಮನೋಭವವನ್ನು ಕಲಿಸಲಾಗುತ್ತದೆ ಎಂಬ ಸಂದೇಶ ಸಾರುವ ವಿಶಿಷ್ಟ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಮದರಸಾ ಮತ್ತು ಮಾಧ್ಯಮಗಳನ್ನು ಪರಸ್ಪರ ಹತ್ತಿರ ಸೇರಿಸುವ ಈ ನೂತನ ಕಾರ್ಯಕ್ರಮ ಬೆಂಗಳೂರಿನ
ಇಂದಿರಾ ನಗರದ ಮಸೀದಿಯೊಂದರಲ್ಲಿ ನಡೆಯಿತು. ಉಮ್ಮುಲ್ ಹಸ್ನೆನ್ ಮಸೀದಿ ಹಾಗೂ ಸೆಂಟರ್ ಫಾರ್ ಕಮ್ಯೂನಿಟಿ ಡೆವಲಪ್ಮೆಂಟ್ ಸಂಸ್ಥೆ ಏರ್ಪಡಿಸಿದ್ದ
ಕಾರ್ಯಕ್ರಮಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಮಾತನಾಡಿ, ಮದರಸಾಗಳ ಇತಿಹಾಸ, ಅವುಗಳ ಕಾರ್ಯ ವೈಖರಿ, ಜ್ಞಾನ ರಂಗಕ್ಕೆ ಮದರಸಾಗಳ ಕಾಣಿಕೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ವಿದ್ವಾಂಸರ ಪಾತ್ರ ವಿವರಿಸಿದರು. ಇದೇವೇಳೆ, ಪತ್ರಕರ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಸನಾವುಲ್ಲಾ, ಮುಂದಿನ ದಿನಗಳಲ್ಲಿ ಮದರಸಾಗಳಲ್ಲಿ ಹೆಚ್ಚಿನ ಸಕಾರಾತ್ಮಕ ಬದಲಾವಣೆಗಳು ಬರುವ ಸಾಧ್ಯತೆಗಳಿವೆ ಎಂದರು. ಬದಲಾಗುತ್ತಿವೆ ಪಠ್ಯ-ಕ್ರಮ: ಮದರಸಾಗಳ ಪಠ್ಯ ಹಾಗೂ ಶಿಕ್ಷಣ ರೀತಿ ಬದಲಾವಣೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಲವು ಮದರಸಾಗಳು ತಮ್ಮ ಬೊಧನಾಕ್ರಮಗಳನ್ನು ಆಧುನೀಕರಿಸಿಕೊಂಡಿವೆ. ಕೆಲವೆಡೆ
ಪ್ರತಿರೋಧ ಇದೆ. ಮದರಸಾಗಳು ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಷಯಗಳನ್ನು ಮಾತ್ರ ಕಲಿಸಬೇಕು, ಇತರ ವಿಷಯಗಳ ಗೋಜಿಗೆ ಹೋಗಬಾರದು ಎಂಬ
ಬೇಡಿಕೆ ಇದೆ. ಆದರೆ, ಹೊಸ ಪೀಳಿಗೆಯ ಆಶಯದಂತೆ ಅನೇಕ ಮದರಸಾಗಳಲ್ಲಿ ಕನ್ನಡ, ಗಣಿತ, ಇಂಗ್ಲೀಷ್ ವಿಷಯಗಳನ್ನು ಕಲಿಸಲಾಗುತ್ತಿದೆ ಎಂಬುದನ್ನು ಉದಾಹರಣೆಸಹಿತ
ವಿವರಿಸಿದರು. ಎಲ್ಲಾ ಮದರಸಾಗಳೂ ಒಂದೆ ತೆರನಾಗಿ ಇರುವುದಿಲ್ಲ. ದೇಶದಲ್ಲಿರುವ ಶೇ.90 ಮದರಸಾಗಳು ನಿತ್ಯ ಒಂದರಿಂದ ಎರಡು ಗಂಟೆ ಕಾಲ ಕಾರ್ಯ ನಿರ್ವಸುವ ಅರೆ ಕಾಲಿಕ ಪಾಠ ಶಾಲೆಗಳಾಗಿರುತ್ತವೆ. ಕೆಲವು ಮಾತ್ರ ಪೂರ್ಣಾವಧಿ ಕೆಲಸ ಮಾಡುತ್ತವೆ. ಮಹಿಳೆಯರಿಗೆಂದೇ ಪ್ರತ್ಯೇಕ ಮದರಸಾಗಳಿವೆ. ಅಲ್ಲಿ ಸ್ವಂತ ಉದ್ಯೋಗ ಕೌಶಲ್ಯ
ಕಲಿಸುವ ಶಿಕ್ಷಣ ನೀಡಲಾಗುತ್ತಿದೆ ಎಂದು ಸನಾವುಲ್ಲಾ ಹೇಳಿದರು.