ಶಿವಮೊಗ್ಗ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅವರಿಗೆ ಜೀವ ಬೆದರಿಕೆ ಉಂಟು ಮಾಡುವ ರೀತಿ ಚರ್ಚೆ ನಡೆಸಿದ್ದ ಕುವೆಂಪು ವಿವಿಯ ಒಬ್ಬ ಪ್ರೊಫೆಸರ್ ಸೇರಿ ನಾಲ್ವರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಹೊಸೆಟ್ಟಿ, ಪರೀಕ್ಷಾಂಗ ವಿಭಾಗದ ಸೂಪರಿಂಟೆಂಡೆಂಟ್ ಎಚ್.ಎಸ್. ವಿಜಯ್, ಇದೇ ವಿಭಾಗದ ಪ್ರಥಮ ದರ್ಜೆ ಸಹಾಯಕ ಸಿದ್ದಲಿಂಗ, ಸಲೀಂ ಅವರ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲರೂ ಒಟ್ಟಿಗೆ ಕಾರಿನಲ್ಲಿ ಹೋಗುವಾಗ ಲೋಕಾಭಿರಾಮವಾಗಿ ಮಾತನಾಡುತ್ತಾ, ಎಂ.ಎಂ. ಕಲಬುರ್ಗಿ ಅವರ ಹತ್ಯೆ ಮಾದರಿಯಲ್ಲಿಯೇ ಡಾ. ಮಲ್ಲಿಕಾ ಘಂಟಿ ಅವರ ಹತ್ಯೆ ನಡೆಸುವ ಬಗ್ಗೆ ಚರ್ಚಿಸಿದ್ದರು.
ಇವರೊಂದಿಗೆ ಪಯಣಿಸುತ್ತಿದ್ದ ವಿವಿಯ ಮಹಿಳಾ ಉದ್ಯೋಗಿಯೊಬ್ಬರು ಇದನ್ನು ಧ್ವನಿಮುದ್ರಿಸಿಕೊಂಡು ಮಲ್ಲಿಕಾ ಘಂಟಿ ಅವರಿಗೆ ತಲುಪಿಸಿದ್ದರು. ಇದರ ಆಧಾರದ ಮೇಲೆ ಮಲ್ಲಿಕಾ ಘಂಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಧ್ವನಿಮುದ್ರಿಕೆಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರಾಗಿದ್ದ ಪ್ರೊ. ಭೋಜಾನಾಯ್ಕ ಅವರೂ ತಮಗೆ ಬೆದರಿಕೆ ಹಾಕಿದ್ದಾರೆಂದು ಪ್ರೊ. ಮಲ್ಲಿಕಾ ಘಂಟಿ ಅವರು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಈ ಹಿಂದೆಯೇ ದೂರು ಸಲ್ಲಿಸಿದ್ದರು. ಈ ಎರಡೂ ಪ್ರಕರಣಗಳ ತನಿಖೆಯನ್ನು ಭದ್ರಾವತಿ ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ ಲಿಂಗಾರೆಡ್ಡಿ ಅವರು ನಡೆಸಲಿದ್ದಾರೆ.