ಜಿಲ್ಲಾ ಸುದ್ದಿ

ಚಿನ್ನಕ್ಕೆ ಕನ್ನ ಹಾಕಿದ್ರು, ಕೋಟಿ ನಾಮ ಇಟ್ರು

Vishwanath S
ಬೆಂಗಳೂರು: ನಗರದ ಜ್ಞಾನಗಂಗಾ ಮಣಪ್ಪುರಂ ಗೋಲ್ಡ್ ಶಾಖೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ರು. 2 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಶುಕ್ರವಾರ ಹಾಡಹಗಲೇ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.
ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ದುಷ್ಕೃತ್ಯ ನಡೆದಿದ್ದು ಕಚೇರಿಯಲ್ಲಿ ಕೇವಲ ಮೂವರು ಸಿಬ್ಬಂದಿಯಷ್ಟೇ ಇದ್ದರು. ಈಗ ಕಳ್ಳರು ಏಕಾಏಕಿ ಕಚೇರಿ ಒಳನುಗ್ಗಿ ಮಾರಕಾಸ್ತ್ರದಿಂದ ಬೆದರಿಸಿ, ಖಾರದ ಪುಡಿ ಎರಚಿದ್ದಾರೆ ನಂತರ ಕಳ್ಳತನ ಮಾಡಿದ್ದಾರೆ. 
ಸಂಸ್ಥೆಯಲ್ಲಿ ರು.3 ಕೋಟಿಯಷ್ಟು ಮೌಲ್ಯದ ಚಿನ್ನಾಭರಣವಿತ್ತು ಎಂದು ಅಂದಾಜಿಸಲಾಗಿದ್ದು, ದರೋಡೆ ಆಗಿರುವ ಚಿನ್ನಾಭರಣದ ಮೊತ್ತ ನಿಖರವಾಗಿ ತಿಳಿದುಬಂದಿಲ್ಲ. ಅಂದಾಜಿನ ಪ್ರಕಾರ ರು. 2 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಂಕಿ ಕ್ಯಾಪ್ ಧರಿಸಿದ್ದರು: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಮಣಪ್ಪುರಂ ಗೋಲ್ಡ್ ನ ಕಚೇರಿ ಅವಧಿ ಮಧ್ಯಾಹ್ನ 2ಕ್ಕೆ ಮುಕ್ತಾಯವಾಗುತ್ತದೆ. ಮಧ್ಯಾಹ್ನದ ನಂತರ ಗ್ರಾಹಕರು ಬರುವುದಿಲ್ಲ. ದರೋಡೆ ನಡೆದ ಸಂದರ್ಭದಲ್ಲಿ ಮಣಪ್ಪುರಂನಲ್ಲಿ ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಮಾತ್ರ ಇದ್ದರು. ಆರೋಪಿಗಳು ಗುರುತು ಸಿಗದಂತೆ ಮುಖಕ್ಕೆ ಮಂಕಿ ಕ್ಯಾಪ್ ಧರಿಸಿದ್ದರು. ಚಿನ್ನಾಭರಣಗಳ ಜತೆಗೆ ನಗದು ಸಹ ದರೋಡೆಯಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT