ಬೆಂಗಳೂರು: ಸರ್ಕಾರದ ಇಲಾಖಾ ನೇರ ನೇಮಕಾತಿಗಳಲ್ಲಿ ಸಿ ವರ್ಗದ ಹುದ್ದೆಗಳಿಗೆ ಸಂದರ್ಶನ ನಡೆಸದಿರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ. ಇನ್ನು ಮುಂದೆ ಸಿ ವರ್ಗದ ಹುದ್ದೆಗಳಿಗೆ ಸಂದರ್ಶನವಿರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯಸಲು ಸಚಿವ ಸಂಪುಟ ಸಮ್ಮತಿಸಿದೆ. ನೇಮಕಾತಿ ವ್ಯವಸ್ಥೆ ಸುಧಾರಣೆ ಕುರಿತು ಹೋಟಾ ಸಮಿತಿ ನೀಡಿರುವ ಶಿಫಾರಸುಗಳನ್ನು ಎಲ್ಲ ನೇಮಕಾತಿಗಳಿಗೂ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಇಲಾಖಾ ನೇಮಕಾತಿಗಳಲ್ಲಿ ಸಿ ವರ್ಗದ ಹುದ್ದೆಗಳಿಗೆ ಸಂದರ್ಶನ ನಡೆಸದರಿಲು ನಿರ್ಧರಿಸಲಾಗಿದ್ದು, ಪರೀಕ್ಷೆ ಅಂಕಗಳ ಮೇಲೆ ಆಯ್ಕೆ ಪ್ರಕ್ರಿಯೆ ನಡೆಲಿದೆ ಎಂದು ಟಿಬಿ ಜಯಚಂದ್ರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಿವಿಲ್ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ತಿದ್ದುಪಡಿ ನಿಯಮ-2006ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದ ಅವರು, ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡುವ ಎ ಮತ್ತು ಬಿ ವರ್ಗದ ಹುದ್ದೆಗಳ ಪರೀಕ್ಷಾ ಅಂಕಗಳನ್ನು ಮೌಖೀಕ ಸಂದರ್ಶನಕ್ಕೂ ಮುಂಚೆ ಪ್ರಕಟಿಸುವಂತಿಲ್ಲ. ಹೋಟಾ ಸಮಿತಿ ಶಿಫಾರಸು ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.