ಬೆಂಗಳೂರು: ವಕೀಲ ವೃತ್ತಿ ಶ್ರೇಷ್ಠವಾದ ಕೆಲಸ, ಪ್ರಾಮಾಣಿಕತೆಯಿಂದ ನ್ಯಾಯಕೊಡಿಸುವ ಕಾರ್ಯವನ್ನು ವಕೀಲರು ಮಾಡಬೇಕು. ನ್ಯಾಯವಾದಿ ಎಂಎಸ್ ಪುರುಶೋತ್ತಮ್ ರಾವ್ ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು. ಎಂದು ಹೈಕೋರ್ಟ್ ನ್ಯಾಯಾಧೀಶ ಎನ್. ಕುಮಾರ್ ಶ್ಲಾಘಿಸಿದರು.
ಶೇಷಾದ್ರಿಪುರಂ ಮಹಾಲಕ್ಷ್ಮಿ ಮಂದಿರದ ಸಭಾಂಗಣದಲ್ಲಿ ಕಿರಿಯ ವಕೀಲರು ಹಮ್ಮಿಕೊಂಡಿದ್ದ ಎಂ.ಎಸ್ ಪುರುಷೋತ್ತಮ ರಾವ್ ಅವರ ವೃತ್ತಿ ಜೀವನದ 50 ನೇ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, " ವೃತ್ತಿ ಜೀವನದಲ್ಲಿ ಸುಮಾರು 60 ರಿಂದ 70 ಕಿರಿಯ ವಕೀಲರಿಗೆ ಉತ್ತಮ ಮಾರ್ಗದರ್ಶನ ನೀಡಿ, ಹಲವು ಸಮರ್ಥ ನ್ಯಾಯವಾದಿ, ನ್ಯಾಯಾಧೀಶರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ, ಪುರುಷೋತ್ತಮ ರಾವ್, ಕಳಂಕ ರಹಿತ ವ್ಯಕ್ತಿತ್ವ ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.
ಕಿರುತೆರೆ ನಿರ್ದೇಶಕ ಟಿ.ಎನ್ ಸೀತಾರಾಮ್ ಮಾತನಾಡಿ ನನ್ನ ಹೃದಯದಲ್ಲಿ ಶಾಶ್ವತವಾದ ನೆಲೆಯೂರಿರುವ ಮೊದಲ ವ್ಯಕ್ತಿ ಪುರುಷೋತ್ತಮ ರಾವ್. ತಮ್ಮಲ್ಲಿ ಅಭ್ಯಾಸ ಮಾಡಲು ಬರುತ್ತಿದ್ದ ಕಿರಿಯ ವಕೀಲರಿಗೆ ವೃತ್ತಿಯ ಜತೆಗೆ ಧೈರ್ಯ ಮತ್ತು ಬದುಕಿನ ಪಾಠ ಹೇಳುತ್ತಿದ್ದರು. ವಕೀಲರು ವೃತ್ತಿಯಲ್ಲಿ ಆಸಕ್ತಿಯಿಲ್ಲದೇ, ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಕ್ರಿಯಾತ್ಮಕ ಮತ್ತು ಶ್ರದ್ಧಾತ್ಮಕ ತಿಳುವಳಿಕೆಯಿಂದ ನಮಗೆ ರಾಜಕೀಯ, ಕಾನೂನು ವಿಷಯಗಳನ್ನು ಜ್ಞಾನ ಉಣಬಡಿಸಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಹೆಚ್. ಬಿಲ್ಲಪ್ಪ, ಹಿರಿಯ ವಕೀಲ ಬಿ.ವಿ ಆಚಾರ್ಯ, ತಾರಕರಾಮ್, ಬಿವಿ ರಾಜಶೇಖರ್ ಉಪಸ್ಥಿತರಿದ್ದರು. ವಕೀಲ ಹರೀಶ್ ಕುಮಾರ್ ಸ್ವಾಗತಿಸಿದರು. ಅರ್ಷದ್ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.