ಜಿಲ್ಲಾ ಸುದ್ದಿ

ಹಾಲಿನ ದರ ಏರಿಕೆ ಖಂಡಿಸಿ ಪ್ರತಿಭಟನೆ

Shilpa D

ಹಾಲಿನ ದರ ಏರಿಕೆ ಮಾಡಿರುವ ಸರ್ಕಾರ ಕ್ರಮ ಖಂಡಿಸಿ ಬೆಂಗಳೂರು ಉಳಿಸಿ ಸಮಿತಿಯು ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಸಮಿತಿಯ ಎಂ.ಎನ್. ಶ್ರೀರಾಮ್ ಅವರು, ಹಾಲಿನ ದರ ಏರಿಕೆಗೆ ಸರ್ಕಾರ ರೈತರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ನಾಗರಿಕರ ವಿರುದಟಛಿ ರೈತರನ್ನು ಎತ್ತಿಕಟ್ಟುವ ಹುನ್ನಾರ ಇದಾಗಿದೆ. ಹಾಲಿನ ದರ ಏರಿಕೆಯಿಂದ
ರೈತರಿಗಿಂತ ಕೆ.ಎಂ.ಎಫ್ ಹಾಗೂ ಖಾಸಗಿಯವರಿಗೆ ಹೆಚ್ಚು ಲಾಭವಾಗಲಿದೆ ಎಂದು ದೂರಿದರು.

ನಿಜವಾಗಿಯೂ ರೈತರಿಗೆ ಸಬ್ಸಿಡಿ ನೀಡುವ ಉದ್ದೇಶ ಸರ್ಕಾರಕ್ಕಿದ್ದರೆ ಹಾಲಿನ ಉತ್ಪಾದನೆಗೆ ಅವಶ್ಯಕವಿರುವ ಉತ್ಪನ್ನಗಳಾದ ಹಿಂಡಿ, ಬೂಸಾ ಹಾಗೂ ಇತರೆ ಪಶು ಆಹಾರ ಬೆಲೆಗೂ ಸಬ್ಸಿಡಿ ನೀಡಲಿ. ಹಾಲಿನ ದರವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು, ಇನ್ನೊಂದು ಕಡೆ ಹಾಲು ಉತ್ಪಾದನೆಗೆ ಪೂರಕವಾದ ಬೆಲೆಗಳನ್ನು ಹೆಚ್ಚಿಸುತ್ತಿದ್ದರೆ ರೈತರಿಗೆ ಹೇಗೆ ಲಾಭ ಬರಲು ಸಾಧ್ಯ. ಇದು ಕೇವಲ ರೈತರ ಹೆಸರಿನಲ್ಲಿ ನಾಗರಿಕರನ್ನು ಮೋಸ ಮಾಡಲು ತಂತ್ರವಾಗಿದ್ದು, ಇದರ ವಿರುದ್ಧ ಹೋರಾಟಗಳು ಹೆಚ್ಚಾಗಬೇಕಿವೆ ಎಂದು ಹೇಳಿದರು.

ಸಮಿತಿಯ ಎಸ್.ಎನ್.ಸ್ವಾಮಿ ಅವರು ಮಾತನಾಡಿ, ಇಂದು ಹಾಲು ನೀರಿನಷ್ಟೇ ಅವಶ್ಯಕವಾಗಿದೆ. ಹಾಲಿನ ದರ ಏರಿಕೆ ಬಡವರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಬಡವರು ಈಗಾಗಲೇ ಕೆಳ ದರ್ಜೆಯ ಹಾಲನ್ನು ಬಳಸುತ್ತಿದ್ದು, ಹಾಲಿನ ದರ ಏರಿಕೆಯಿಂದ ಕಲಬೆರಕೆಯ ಹಾಲಿಗೆ ಬೇಡಿಕೆ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ಒಳಗಾಗಲಿದ್ದಾರೆ. ಅಗತ್ಯವಾದ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಈಗ ಹಾಲಿನ ದರ ಹೆಚ್ಚಿಸಿರುವುದು ಸರಿಯಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಮಿತಿಯ ಎಸ್.ಶೋಭ, ವಿ.ಜ್ಞಾನಮೂರ್ತಿ ಸೇರಿದಂತೆ ಹಲವರು ಭಾಗಹಿಸಿದ್ದರು.

SCROLL FOR NEXT