ಜಿಲ್ಲಾ ಸುದ್ದಿ

ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಳ್ಳಿ

Manjula VN

ಬೆಂಗಳೂರು: ಸಂಸದರ ನಿರ್ದೇಶನದ ಮೇರೆಗೆ ಜನೋಪಕಾರಿ ಕಾರ್ಯಗಳನ್ನು ಅಲಕ್ಷಿಸುವ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ನಿರ್ದೇಶನದ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಯ ಬೇಗೂರುಕೊಪ್ಪದಿಂದ ದೊಡ್ಡ ತೋಗೂರು ನಡುವಿನ 20ಕಿ.ಮೀ. ರಸ್ತೆಯ ಅಗಲೀಕರಣ ಯೋಜನೆ ಕೈ ಬಿಟ್ಟ ಬಿಡಿಎ ಆಯುಕ್ತರ ಕ್ರಮಕ್ಕೆ ನ್ಯಾ.ಆನಂತಬೈರಾರೆಡ್ಡಿ ಅವರಿದ್ದ ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಸ್ತೆ ಕಾಮಗಾರಿಗೆ ಅಗತ್ಯವಾದ ಭೂಮಿಯ ಶೀಘ್ರದಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ನಂತರ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಬಿಡಿಎ ಆಯುಕ್ತರಿಗೆ ನ್ಯಾಯಪೀಠ ಸೂಚನೆ ನೀಡಿದೆ. ಬಿಡಿಎ ಆಯುಕ್ತರು ತಮ್ಮ ಅಧಿಕಾರವನ್ನು ಉಪಯೋಗಿಸದೆ. ರಸ್ತೆ ಅಗಲೀಕರಣ ಮಾಡದಂತೆ ಸಂಸದರ ಸೂಚನೆಯಂತೆ ಪಾಲನೆ ಮಾಡಿರುವುದು ಕಾನೂನು ಪರಿಧಿಯಲ್ಲಿ ಸೂಕ್ತವಾದ ಕ್ರಮವಲ್ಲ. ಆಯುಕ್ತರು ಮತ್ತೆ ಈ ವರ್ತನೆಯನ್ನು ತೋರಬಾರದು. ರಸ್ತೆ ಅಗಲೀಕರಣದಿಂದ ಕೇವಲ ಕೆಲ ಭೂ ಮಾಲೀಕರು ಭೂಮಿ ಕಳೆದುಕೊಳ್ಳಬಹುದು. ಆಧರೆ, ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಸಹಾಯವಾಗುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರೂಪಿಸಿದ್ದ ಮಾಸ್ಟರ್ ಪ್ಲಾನ್ ನಲ್ಲಿ ಈ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಿತ್ತು. ನಂತರ ಯೋಜನೆ ಕೈ ಬಿಟ್ಟು ಅಧಿಸೂಚನೆ ಹೊರಡಿಸಿದ್ದು ಸರಿಯಲ್ಲ .ಹೀಗಾಗಿ ರಸ್ತೆ ಅಗಲೀಕರಣ ಮಾಡಬೇಕು ಎಂದು ನ್ಯಾಯಪೀಠ ಹೇಳಿತು.

ಪ್ರಕರಣವೇನು?

ಬೆಂಗಳೂರು ನಗರದ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಿದ್ದ ಮಾಸ್ಟರ್ ಪ್ಲಾನ್‍ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೇಗೂರು ಕೊಪ್ಪದಿಂದ ದೊಡ್ಡ ತೋಗೂರು ನಡುವಿನ 2 ಕಿ.ಮೀ ರಸ್ತೆ ಅಗಲೀಕರಣ ಮಾಡಲು ಬಿಡಿಎ ನಿರ್ಧರಿಸಿತ್ತು. ರಸ್ತೆ ಅಗಲೀಕರಣಕ್ಕೆ ಅಗತ್ಯ ಭೂ ಸ್ವಾಧೀನ ಪಡಿಸಿಕೊಳ್ಳಲು 2012ರಲ್ಲಿ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು.
ಈ ಮಧ್ಯೆ ಖಾಸಗಿ ಸಂಸ್ಥೆಯೊಂದು ಈ ರಸ್ತೆಯನ್ನು ಅಗಲೀಕರಣ ಮಾಡಿಕೊಡುವುದಾಗಿ ಮುಂದೆ ಬಂದಿತ್ತು. ಆದರೆ ರಸ್ತೆ ಅಗಲೀಕರಣ ಹಾಗೂ ಭೂ ಸ್ವಾಧೀನದ ವಿರುದ್ಧ ಭೂ ಮಾಲೀಕರು ತಿವ್ರ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ನಂತರ ಈ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮಧ್ಯಪ್ರವೇಶಿಸಿ, ರಸ್ತೆ ಅಗಲೀಕರಣ ಮಾಡದಂತೆ ಬಿಡಿಎ ಆಯುಕ್ತರಿಗೆ 2013ರಲ್ಲಿ ಪತ್ರವನ್ನೂ ಬರೆದಿದ್ದರು. ಇದರಿಂದ ಬಿಡಿಎ ಆಯುಕ್ತರ ಸಭೆಯನ್ನು ಕರೆದು ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಜತೆಗೆ, ಯೋಜನೆ ಕೈಬಿಟ್ಟು ಅಧಿಸೂಚನೆಯೂ ಹೊರಡಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿ ಎರ್ರಿಸ್ವಾಮಿ ಎಂಬುವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

SCROLL FOR NEXT