ಜಿಲ್ಲಾ ಸುದ್ದಿ

ಕ್ರೌರ್ಯ ಬಿಂಬಿಸುವಿಕೆ ಸಲ್ಲ: ಡಾ.ಹಂಪ ನಾಗರಾಜಯ್ಯ

Manjula VN

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಉಗ್ರವಾದವನ್ನೇ ಹೆಚ್ಚಾಗಿ ಬಿಂಬಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಹೇಳಿದರು.

ನಗರದ ಉದಯಭಾನು ಕಲಾಸಂಘ ಹೊರ ತಂದಿರುವ ಅಂತಿಮ ಕಂತಿನ ಸುವರ್ಣ ಪುಸ್ತಕ ಮಾಲೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಧ್ಯಮದಲ್ಲಿ ಉಗ್ರವಾದಿಗಳ ವಿಚಾರಗಳ ಜತೆಗೆ ಸಾಹಿತ್ಯಿಕ ವಿಚಾರಗಳು ಪ್ರಸಾರವಾಗುತ್ತಿರುವುದು ಸಮಾಧಾನದ ಸಂಗತಿ ಎಂದರು.

ಎಂಟು ಆತ್ಮಚರಿತ್ರೆ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ಇಂದಿನ ಸಮಾಜದಲ್ಲಿ ಗುರಿ ಮತ್ತು ಗುರು ಎರಡೂ ಇಲ್ಲ. ಹಿರಿಯ ಸಾಧಕರು ಯುವ ಸಮುದಾಯಕ್ಕೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಬಡತನ, ಹಸಿವು, ಅವಮಾನದ ನಡುವೆಯೂ ಛಲದಿಂದ ಸಾಧನೆ ಸಾಧ್ಯ ಎಂಬುದನ್ನು ಯುವ ಜನತೆ ಅರಿಯಬೇಕಿದೆ ಎಂದು ಹೇಳಿದರು.

ಬಿ.ಜಿ ಬಣಕಾರ, ಡಾ. ಎಚ್. ನರಸಿಂಹಯ್ಯ, ಡಾ. ಕಲ್ಯಾಣ ಜಗನ್ನಾಥ್ ರಾವ್, ಖಾದ್ರಿ ಶಾಮಣ್ಣ, ಡಾ. ವಿಜಯ, ಏರ್ಯ ಲಕ್ಷೀನಾರಾಯಣ ಆಳ್ವ, ಪ್ರೊ. ಎಂ.ಡಿ.ನಂಜುಂಡ ಸ್ವಾಮಿ, ವೀಣೆ ರಾಜ ರಾಯರ ಆತ್ಮಚರಿತ್ರೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಜತೆಗೆ ಆತ್ಮಚರಿತ್ರೆಗಳ ಲೇಖಕರಾದ ಎಸ್.ಪಿ ಗೌಡರ, ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಡಾ. ವೈ. ತುಳಜಪ್ಪ, ಡಾ.ಟಿ. ಪದ್ಮಾ, ಡಾ. ಕೋ.ವೆಂ. ರಾಮಕೃಷ್ಣಗೌಡ, ಎಂ.ರಾಮಚಂದ್ರ, ವೀರಭದ್ರಪ್ಪ ಬಿಸ್ಲಳ್ಳಿ, ಡಾ.ಆರ್.ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.

SCROLL FOR NEXT