ಜಿಲ್ಲಾ ಸುದ್ದಿ

ಎಲ್ಲಾ ದಾಖಲೆಗಳ ಸಂಗ್ರಹ, ಸಿಜೆ ಅವರಿಗೆ ಸದ್ಯದಲ್ಲೆ ಸಲ್ಲಿಕೆ

Shilpa D

ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರ ಪದಚ್ಯುತಿ ಪ್ರಸ್ತಾವನೆಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲು ವಿಳಂಬವಾಗಿದ್ದು, ಇನ್ನೊಂದು ವಾರದಲ್ಲಿ ಈ ಕುರಿತ ಪ್ರಸ್ತಾವನೆ ಕಳುಹಿಸಿಕೊಡುವೆ' ಎಂದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಲೋಕಾಯುಕ್ತ ನ್ಯಾ. ಸುಭಾಷ್‌ ಅಡಿ ಅವರ ವಿರುದ್ಧ ಮಂಡಿಸಿರುವ ಹಕ್ಕುಚ್ಯುತಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಅದನ್ನು ಅಂಗೀಕರಿಸಿದ್ದೇನೆ. ಆದರೆ, ಅನಾರೋಗ್ಯದ ಕಾರಣದಿಂದಾಗಿ ಅದನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲು ವಿಳಂಬವಾಯಿತು ಎಂದರು.

ಈ ವಿಚಾರದಲ್ಲಿ ತಮ್ಮ ವಿರುದ್ಧ ಕೆಲವರು ಪ್ರತಿಕ್ರಿಯಿಸಿರುವ ಬಗ್ಗೆ ಕಿಡಿ ಕಾರಿದ ತಿಮ್ಮಪ್ಪ, 'ಇಂತಹ ಗಂಭೀರ ವಿಚಾರಗಳಲ್ಲಿ ಹುಡುಗಾಟಿಕೆ ಮಾಡಲು ನಾನೇನೂ ಹುಡುಗನಲ್ಲ. ಯಾರದ್ದೊ ಒತ್ತಡಕ್ಕೆ ಮಣಿಯುತ್ತೇನೆ ಎನ್ನಲು ನಾನು ಯಾರ ಮಾತನ್ನೂ ಕೇಳುವವನಲ್ಲ. ನ್ಯಾ. ಅಡಿ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸರಿ ಇವೆ ಎಂಬುದು ನನಗೆ ಅನಿಸಿದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡುತ್ತೇನೆ' ಎಂದು ಸ್ಪಷ್ಟಪಡಿಸಿದರು.

ಲೋಕಾಯುಕ್ತರ ಆಯ್ಕೆ ಕುರಿತ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸಭೆ ರದ್ದಾಗಿರುವುದು ನನಗೆ ಗೊತ್ತಿಲ್ಲ ಎಂದು ಕಾಗೋಡು ತಿಮ್ಮಪಪ್ಪ ಅವರು ಹೇಳಿದರು.

SCROLL FOR NEXT