ಜಿಲ್ಲಾ ಸುದ್ದಿ

ಪ್ರತ್ಯೇಕ ರಸ್ತೆ ಅಪಘಾತ ಮೂವರ ದುರ್ಮರಣ

Manjula VN

ಬೆಂಗಳೂರು: ನಗರದಲ್ಲಿ ಸೋಮವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.

ರಸ್ತೆ ಮೇಲ್ಸೇತುವೆ ತಡೆಗೋಡೆಗೆ ಬೈಕ್ ಗುದ್ದಿದ ಪರಿಣಾಮ ಬಾಲಕ ಮೃತಪಟ್ಟು ಆತನ ತಂದೆ ಗಾಯಗೊಂಡಿರುವ ಘಟನೆ ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಜಿಪುರದ ಬಾವಿನ್ (9) ಮೃತ ಬಾಲಕ. ಈತನ ತಂದೆ ರುದ್ರಯ್ಯ (35) ಗಂಭೀರವಾಗಿ ಗಾಯಗೊಂಡು ಚಿಕಿಸ್ತೆ ಪಡೆಯುತ್ತಿದ್ದಾರೆ. ಅಚ್ಛಿನ್ಸ್ ರಸ್ತೆಯಲ್ಲಿರುವ ಮಾವನ ಮನೆಯಲ್ಲಿ ಮಗನೊಂದಿಗೆ ಊಟ ಮುಗಿಸಿ ಈಜಿಪುರದ ನಿವಾಸಕ್ಕೆ ವಾಪಸಾಗುವಾಗ ಘಟನೆ ನಡೆದಿದೆ. ಮಧ್ಯಾಹ್ನ 2.30ರ ಸುಮಾರಿಗೆ ಬೈಕ್ ನಲ್ಲಿ ಐಟಿಸಿ ಮೇಲ್ಸೇತುವೆಯಲ್ಲಿ ಬರುವಾಗ ನಿಯಂತ್ರಣ ಕಳೆದುಕೊಂಡ ರುದ್ರಯ್ಯ ತಡೆಗೋಡೆಗೆ ಗುದ್ದಿದ್ದಾರೆ. ಪುಲಿಕೇಶಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋಗ್ರಾಫರ್ ಸಾವು
ಬೇಕ್ ಮತ್ತು ಸ್ವರಾಜ್ ಮಜ್ದಾ ನಡುವೆ ಸಂಭವಿಸಿ ಮುಖಾಮುಖಿಯಲ್ಲಿ ಬೈಕ್ ಸವಾರ ಮೃತಪಟ್ಟು, ಇಬ್ಬರು ಬಾಲಕರು ಗಾಯಗೊಂಡಿದ್ದಾರೆ.

ಉರುಳು ಚಿಕ್ಕನಹಳ್ಳಿ ನಿವಾಸಿ ಆನಂದ್ ಕುಮಾರ್ (41) ಮೃತರು. ನೆರಮನೆಯ ಪ್ರಹ್ಲಾದ್ (8) ಮತ್ತು ಜಾಫರ್ (8) ಗಾಯಗೊಂಡವರು. ಇವರು ಟ್ಯೂಷನ್ ಗೆಂದು ಹೆಸರುಘಟ್ಟಕ್ಕೆ ತೆರಳಿದ್ದರು. ಫೋಟೋಗ್ರಾಫರ್ ಆನಂದ್ ಕುಮಾರ್ ರಾತ್ರಿ 8.30ಕ್ಕೆ ಪ್ರಹ್ಲಾದ್ ಮತ್ತು ಜಾಫರ್ ನನ್ನು ತಮ್ಮ ಬೈಕ್ ನಲ್ಲಿ ಕೂರಿಸಿಕೊಂಡು ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ.

ಮಾರ್ಗದ ತಿರುಮಲಪುರದ ಬಳಿ ಬರುತ್ತಿದ್ದಾಗ ಎದುರಿನಿಂದ ಬಂದ ಸ್ವರಾಜ್ ಮಜ್ದಾ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ನೆಲಕ್ಕೆ ಬಿದ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆನಂದ್ ಮೃತಪಟ್ಟಿದ್ದಾರೆ. ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ನಿಂದ ಬಿದ್ದು ಮಹಿಳೆ ಸಾವು
ಅಳಿಯನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗವಾರ ನಿವಾಸಿ ಪರ್ವೀನ್ ತಾಜ್ (55) ಮೃತರು. ಮಧ್ಯಾಹ್ನ 1.30ರ ಸುಮಾರಿಗೆ ಅಳಿಯ ಅಕ್ಮಲ್ ಪಾಷ ಜತೆ ಬೈಕ್ ನಲ್ಲಿ ಹೆಗಡೆನಗರ ಮುಖ್ಯರಸ್ತೆಯಲ್ಲಿ ಹೋಗುವಾಗ ಆಯತಪ್ಪಿ ರಸ್ತೆಗೆ ಬಿದ್ದ ಪರ್ವಿನ್ ತಾಜ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲ ನೀಡಲಿಲ್ಲ. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT