ಜಿಲ್ಲಾ ಸುದ್ದಿ

ವಿಜಯಪುರ ಸೆಂಟ್ರಲ್ ಜೈಲಿನಲ್ಲಿ ಐಟಂ ಡ್ಯಾನ್ಸ್.

Shilpa D

ವಿಜಯಪುರ: ಜೈಲಿನಲ್ಲಿ ಬಂಧಿಯಾಗಿದ್ದ 38 ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ  ಗಣರಾಜ್ಯೋತ್ಸವದಂದು ಬಿಡುಗಡೆ ಭಾಗ್ಯ ಸಿಕ್ಕಿತು. ಆದರೆ ಅದೇ ದಿನ ಜೈಲಿನಲ್ಲಿದ್ದ ಕೈದಿಗಳಿಗೆ ಐಟಂ ಡ್ಯಾನ್ಸ್ ನೋಡುವ ಅವಕಾಶ ಕಲ್ಪಿಸಿದ ಕೇಂದ್ರ ಕಾರಾಗೃಹದ ಸಿಬ್ಬಂದಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಗಣರಾಜ್ಯೋತ್ಸವದ ಮುಖ್ಯ ಕಾರ‌್ಯಕ್ರಮ ಮುಗಿದ ನಂತರ ಈ ಘಟನೆ ನಡೆದಿದೆ. ಬೆಳಗ್ಗೆ ನಡೆದ ಕಾರ‌್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಿಎಂ ಸಂಸದೀಯ ಕಾರ್ಯದರ್ಶಿಗಳಾದ ಡಾ. ಮಕ್ಬೂಲ್ ಬಾಗವಾನ, ರಾಜು ಆಲಗೂರ, ಜಿಲ್ಲಾಧಿಕಾರಿ ಡಿ. ರಂದೀಪ್, ಎಸ್ಪಿ ಎಸ್.ಎನ್. ಸಿದ್ರಾಮಪ್ಪ, ಜಿಲ್ಲಾ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಆರ್.ಎಸ್. ಅಂಬೇಕರ್ ಮುಂತಾದವರೆಲ್ಲ ಪಾಲ್ಗೊಂಡಿದ್ದರು. ಸನ್ನಡತೆಯ ಕೈದಿಗಳಿಗೆ ಪ್ರಮಾಣಪತ್ರ ನೀಡಿ ಬೀಳ್ಕೊಟ್ಟು ಗಣ್ಯರೆಲ್ಲರೂ ತೆರಳಿದ ಬಳಿಕ ಜೈಲಿನ ಆವರಣದಲ್ಲಿಯೇ ಈ ಐಟಂ ಡ್ಯಾನ್ಸ್ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸಮಾರಂಭ ನಡೆದ ವೇದಿಕೆಯನ್ನೇ ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಇನ್ನೂ ಶಿಕ್ಷೆಯ ಅವಧಿ ಪೂರೈಸಬೇಕಿರುವ ನೂರಾರು ಕೈದಿಗಳು ವೇದಿಕೆಯ ಮುಂಭಾಗದಲ್ಲಿ ಕುಳಿತು ಈ ನೃತ್ಯಕ್ಕೆ ಸಾಕ್ಷಿಯಾದರು. ಕೈದಿಗಳಿಂದ ಹಣ ಸಂಗ್ರಹಿಸಿದ ಒಬ್ಬ ವ್ಯಕ್ತಿ, ಆ ಯುವತಿಯತ್ತ ನೋಟುಗಳನ್ನು ತೂರಿದ್ದಾನೆ. ಬೇರೊಬ್ಬ ಕೂಡ ಹಾಗೆಯೇ ನೋಟುಗಳನ್ನು ತೂರಲು ಎದ್ದುಬಂದಾಗ ವೇದಿಕೆಯ ಬದಿಯಲ್ಲಿ ನಿಂತಿದ್ದ ಜೈಲು ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಐಟಂ ಡ್ಯಾನ್ಸ್ ಮಾಡಿದ ಯುವತಿಯನ್ನು ಮುಂಬೈನಿಂದ ಇದೇ ಉದ್ದೇಶಕ್ಕಾಗಿ ಕರೆಸಲಾಗಿತ್ತು. ಚಲನಚಿತ್ರದ ಹಾಡುಗಳಿಗೆ ಆಕೆ ವೇದಿಕೆ ಮೇಲೆ ನರ್ತಿಸುತ್ತಿದ್ದರೆ, ವೇದಿಕೆ ಮುಂಭಾಗದಲ್ಲಿ ಕೆಲವು ಕೈದಿಗಳು ಕುಣಿಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂಧೀಖಾನೆಯಲ್ಲಿ ನೃತ್ಯ ಕಾರ್ಯಕ್ರಮ ಸಂಘಟಿಸಿದ್ದ ಬಗ್ಗೆ ವರದಿ ನೀಡುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ನಾನೂ ಕೂಡ ಸ್ಥಳಕ್ಕೆ ಹೊರಟಿದ್ದೇನೆ. ಯಾವ ರೀತಿಯ ಕಾರ್ಯಕ್ರಮ ಸಂಘಟಿಸಲಾಗಿತ್ತು, ಅಲ್ಲಿ ಆಗಿದ್ದೇನು ಎನ್ನುವುದರ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT