ವಿಜಯಪುರ: ಆರಕ್ಷಕ ಠಾಣೆಗೆ ಬಂದು ಮುಕ್ತವಾಗಿ ಅಹವಾಲು ಅಥವಾ ಸಲಹೆ ನೀಡಲು ಮುಜುಗರ ಅಥವಾ ತೊಂದರೆ ಎನ್ನಿಸುವವರು ತಮ್ಮ ಸಲಹೆ ದೂರುಗಳನ್ನು ಇನ್ನು ಮುಂದೆ ಸಲಹಾ ಪೆಟ್ಟಿಗಳಿಗೆ ಬರೆದು ಹಾಕುವ ಮುಖಾಂತರ ತಮ್ಮ ಸೂಚನೆಯನ್ನು ಪೊಲೀಸರಿಗೆ ನೀಡಬಹುದು ಎಂದು ಆರಕ್ಷಕ ವೃತ್ತ ನಿರೀಕ್ಷಕ ಮಹೇಶ್ಕುಮಾರ್ ತಿಳಿಸಿದರು. ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ನೂತನವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಲಹಾ ಪೆಟ್ಟಿಗೆಯನ್ನು ಅಳವಡಿಸುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯಪುರ ಪಟ್ಟಣದಲ್ಲಿ ಬಸ್ ನಿಲ್ದಾಣ, ಗಾಂಧಿ ಚೌಕ, ಚನ್ನರಾಯಪಟ್ಟಣ ಸರ್ಕಲ್, ಶಿಢ್ಲಘಟ್ಟ ಡಿವಿಯೇಷನ್ ಸರ್ಕಲ್ ಪುರಸಭೆ ಹತ್ತಿರ ಹೀಗೆ ಐದು ಕಡೆ ಪೆಟ್ಟಿಗೆಗಳನ್ನು ಅಳವಡಿಸಲಾಗಿದ್ದು ವಿಶ್ವನಾಥಪುರ ಠಾಣೆ ವ್ಯಾಪ್ತಿಯಲ್ಲಿ ವಿಶ್ವನಾಥಪುರ, ಚಪ್ಪರ ಕಲ್ಲು ಹಾಗೂ ಕೊಯಿರಾ ಗ್ರಾಮಗಳ ಮೂರು ಕಡೆ, ಚನ್ನರಾಯಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಬಾಲೇಪುರ ಕ್ರಾಸ್, ಬೂದಿಗೆರೆ ಎರಡು ಕಡೆಗಳಲ್ಲಿ ಅಳವಡಿಸಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಪಟ್ಟಿಗೆಗಳನ್ನು ವಾರಕೊಮ್ಮೆ ಠಾಣೆ ಸಿಬ್ಬಂದಿಯಿಂದ ತೆರೆದು ಬಂದಂತಹ ಅಹವಾಲುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಸೂಕ್ತ ಕ್ರಮ ಹಾಗೂ ಸಲಹೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ವಿಜಯಪುರ ಪಟ್ಟಣದ ಆರಕ್ಷಕ ಉಪ ನಿರೀಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.