ಟೇಕಲ್: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಾಹಿತ್ಯ ನಮ್ಮ ನಿಜವಾದ ಆಸ್ತಿ, ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ನಿಜವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ, ಸಾಹಿತಿಗಳು ಮಾಸ್ತಿಯವರ ಸಾಹಿತ್ಯವನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬೆಂಗಳೂರಿನ ವರ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಎಸ್. ಸತ್ಯನಾರಾಯಣ ಹೇಳಿದರು.
ಮಾಸ್ತಿ ಗ್ರಾಮದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಂಸ್ಕೃತಿ ಭವನದಲ್ಲಿ ಗುರುವಾರ ನಡೆದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಮಾಸ್ತಿರವರ 122ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಾಸ್ತಿ ಬದುಕು-ಬರಹ ಎಂಬ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಮಾಸ್ತಿಯವರ ಬದುಕು-ಬರಹಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಕನ್ನಡತ್ವವನ್ನು ದಟ್ಟವಾಗಿ ಕಾಣಬಹುದು ಮಾಸ್ತಿಯವರಂತಹ ಸೌಜನ್ಯವಂತರನ್ನು, ದೊಡ್ಡ ಹೃದಯವಂತಿಕೆಯನ್ನು ಇಂದಿನ ದಿನಗಳಲ್ಲಿ ಕಾಣುವುದು ದುರ್ಲಭ ಎಂದ ಅವರು ಸಣ್ಣ ಕಥೆ ನನ್ನ ಕೈ ಹಿಡಿ ಎಂಬ ವಿನಯ ಮಾಸ್ತಿಯವರಲ್ಲಿತ್ತು.
ಬದುಕು ದೊಡ್ಡದಾದರೆ, ಬರಹ ದೊಡ್ಡದಾಗುವುದಿಲ್ಲ ಎಂಬುದು ಮಾಸ್ತಿಯವರ ನಂಬುಗೆಯಾಗಿತ್ತು ಎಂದರು.ಕ.ಸಾ.ಪ. ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವೆಂಕಟಾಚಲಪತಿ, ತಾಲೂಕು ಕ.ಸಾ.ಪ. ಅಧ್ಯಕ್ಷ ಮಧುಸೂದನ್, ಎ. ಅಶ್ವಥರೆಡ್ಡಿ, ಉಪನ್ಯಾಸಕ ಚಂದ್ರಪ್ಪ, ತಾ.ಪಂ. ಅಧ್ಯಕ್ಷ ಚಂದ್ರಪ್ಪ, ಗ್ರಾ.ಪಂ. ಅಧ್ಯಕ್ಷ ಹೆಚ್.ವಿ. ಶ್ರೀನಿವಾಸ್, ಮಾಜಿ ತಾ.ಪ. ಸದಸ್ಯ ಟಿ. ಮುನಿಯಪ್ಪ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಂತೂರು ಚಂದ್ರಪ್ಪ, ಮಾಸ್ತಿ ಕೃಷ್ಣಪ್ಪ, ಜ.ಮು. ಚಂದ್ರ, ವಕೀಲ ಮುನಿಕೃಷ್ಣಪ್ಪ, ನಾರಾಯಣಪ್ಪ, ಮುನಿರಾಜು, ಗುರುಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.