ಕ.ಪ್ರ.ವಾರ್ತೆ ಮೈಸೂರು ಏ.29
ರಾಗಿ, ಸಾಮೆ, ನವಣೆ ಮುಂತಾದ ಬೆಳೆಗಳನ್ನು ದ್ವಿತೀಯ ದರ್ಜೆ ಬೆಳೆಯಂತೆ ನೋಡುವುದು ತಪ್ಪು ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದ ಮನೆಯಂಗಳದಲ್ಲಿ ಸಂವಹನ ಪ್ರಕಾಶಕರು ಏರ್ಪಡಿಸಿದ್ದ ಡಾ.ಪೂರಿಗಾಲಿ ಎಸ್. ಬಾಲಕೃಷ್ಣನ್ ಅವರ ರಾಗಿ ಮತ್ತು ಡಯಾಬಿಟೀಸ್ ಹಾಗೂ ಶಾಸನ ಮತ್ತು ಜನಪದದಲ್ಲಿ ರಾಗಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ರಾಗಿಯಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಇದೆ. ಆದರೂ ನಾವು ಅದನ್ನು ಕಿರುಧಾನ್ಯ ಹೆಸರಿನಲ್ಲಿ ದ್ವಿತೀಯ ದರ್ಜೆ ಧಾನ್ಯಗಳಾಗಿ ನೋಡುವುದು ತಪ್ಪು ಎಂದರು.
ರಾಗಿಯ ಬಗ್ಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಗಾದೆ, ಒಗಟು ಮುಂತಾದವುಗಳಲ್ಲಿ ಅದರ ಸಿರಿವಂತಿಗೆಯ ಉಲ್ಲೇಖವಿದೆ. ಇತರೆ ಧಾನ್ಯಗಳಿಗಿಂತ ಉತ್ತಮ ಗುಣವನ್ನು ರಾಗಿ ಹೊಂದಿದೆ. ಬೇರೆ ಧಾನ್ಯಗಳು ಬಿತ್ತನೆಯಿಂದ ಆರಂಭವಾಗಿ ಕಣಜ ಸೇರಿದರೂ ಹಲವು ಕೀಟಗಳು ಕಾಡುತ್ತವೆ.
ಆದರೆ ರಾಗಿಗೆ ಕೀಟ ಕಾಡುವುದು ಕಡಿಮೆ. ಅಲ್ಲದೆ ಈ ಧಾನ್ಯ ಬಹುಬೇಗ ಮಾಸುವುದಿಲ್ಲ. ಅಲ್ಲದೆ ಕಟಾವುಗೊಳಿಸಿದ ಕೂಡಲೇ ಬಿತ್ತನೆ ಮಾಡಿದರೂ ಮೊಳಕೆ ಬರುವ ಶಕ್ತಿ ಇದಕ್ಕೆ ಮಾತ್ರ ಇದೆ ಎಂದರು.
ಪುಸ್ತಕ ಕುರಿತು ನಂಜನಗೂಡು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು. ಪ್ರಜ್ಞಾಕುಟೀರ ಆಯುರ್ವೇದ ಕೇಂದ್ರದ ನಿರ್ದೇಶಕ ಡಾ.ಎನ್.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಪೂರಿಗಾಲಿ ಎಸ್. ಬಾಲಕೃಷ್ಣನ್, ಪ್ರಕಾಶಕ ಡಿ.ಎನ್. ಲೋಕಪ್ಪ ಇದ್ದರು.