ರಾಯಚೂರು: ನಟ ಶರಣ್ ಅಭಿನಯದ ಚಲನಚಿತ್ರ 'ಅಧ್ಯಕ್ಷ'ದಲ್ಲಿ ಹಿಂದೂಗಳ ಆರಾಧ್ಯದೈವ ಭಗವಾನ್ ಶ್ರೀಕೃಷ್ಣನನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಿರುವುದನ್ನು ಖಂಡಿಸಿ ಚಿತ್ರದ ಮೇಲೆ ನಿರ್ಬಂಧ ಹೇರಬೇಕು. ತೆಲಂಗಾಣ ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.12ರಷ್ಟು ಮೀಸಲು ನೀಡಿಕೆಯನ್ನು ರದ್ದುಗೊಳಿಸಲು ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತರು, ಶಂಕರ್ ಮೂವೀಸ್ ನಿರ್ಮಿತ ಅಧ್ಯಕ್ಷ ಚಲನಚಿತ್ರದ ಹಾಡೊಂದರಲ್ಲಿ ಶ್ರೀಕೃಷ್ಣವೇಷಧಾರಿಗಳೊಂದಿಗೆ ನಟ ಶರಣ್ ನೃತ್ಯ ಮಾಡುವಂತೆ ಪ್ರದರ್ಶಿಸಲಾಗಿದೆ. ಅಲ್ಲದೇ ಚಿತ್ರದ ಪೋಸ್ಟರ್ಗಳಲ್ಲಿಯೂ ನಟ-ನಟಿಯರು ಶ್ರೀಕೃಷ್ಣ ವೇಷಧಾರಿಗಳಿಗೆ ಆಶೀರ್ವದಿಸುವಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿದರು.
ಅಪಮಾನ: ಇಂಥ ಚಿತ್ರಗಳ ಪ್ರದರ್ಶನವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನಕಾರಿಯಾಗಿದೆ. ಕಾರಣ ಈ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರುವಂತೆ ಒತ್ತಾಯಿಸಿದ ಕಾರ್ಯಕರ್ತರು, ತೆಲಂಗಾಣ ರಾಜ್ಯದಲ್ಲಿ ಮುಸಲ್ಮಾನರಿಗೆ ಶೇ.12ರಷ್ಟು ಮೀಸಲನ್ನು ನೀಡಿರುವುದು ಸಂವಿಧಾನಬಾಹಿರ ಕ್ರಮವಾಗಿದೆ ಎಂದು ದೂರಿದರು.
ಅಪಮಾನಕ್ಕೆ ತಡೆಗೆ ಒತ್ತಾಯ: ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಯಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ಪ್ಲಾಸ್ಟಿಕ್ ಧ್ವಜದ ಬಳಕೆ ನಿಷೇಧಿಸಬೇಕು. ಶ್ರೀಕೃಷ್ಣನನ್ನು ಅಪಮಾನಿಸುವ ಕನ್ನಡದ ಅಧ್ಯಕ್ಷ ಚಲನಚಿತ್ರದ ಮೇಲೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದರು.
ಕೂಡಲೇ ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಅಧ್ಯಕ್ಷ ಚಲನಚಿತ್ರದ ಮೇಲೆ ನಿರ್ಬಂಧ ಹೇರಬೇಕು. ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ನೀಡಿದ ಶೇ.12ರಷ್ಟು ಉದ್ಯೋಗ ಹಾಗೂ ಶಿಕ್ಷಣದ ಮೀಸಲು ರದ್ದುಪಡಿಸುವಂತೆ ಆಗ್ರಹಿಸಿದರು. ಈ ವೇಳೆ ಸಮಿತಿ ಮುಖಂಡರಾದ ಕೃಷ್ಣವೇಣಿ, ಸುವರ್ಣ, ಜ್ಯೋತಿ, ಉಮಾ, ಶೋಭಾ, ಜಯಾ ಪಾಟೀಲ್, ಸರಳಾ, ಬಿ.ವಿಜಯಲಕ್ಷ್ಮೀ, ವಾಸಂತಿ ಇದ್ದರು.