ಯಲ್ಲಾಪುರ: ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬುದು ಪುರಾತನ ನುಡಿ. ಆದರೆ, ಅದನ್ನು ಪೂರ್ಣ ಅರಿತು, ಅನುಸರಿಸದಿರುವವರು ಇತ್ತೀಚೆಗೆ ಕೃಷಿತೋ ಜಾಸ್ತಿ ದುರ್ಭಿಕ್ಷಂ ಎಂಬ ಹೊಸ ಮಾತಿನ ಸೃಷ್ಟಿಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಕುರಿತಾಗಿ ಆಸಕ್ತಿ ಮೂಡಿಸುವ ಸದಾಶಯದೊಂದಿಗೆ ಚಿಂತನೆ ನಡೆಸಿದ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಗಳು ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಪ್ರಗತಿಪರ ಕೃಷಿಕ ರಾಮಕೃಷ್ಣ ಭಾಗ್ವತ ಶೀಗೇಪಾಲ ಹೇಳಿದರು.
ಬುಧವಾರ ಬೆಳಗ್ಗೆ ಪಟ್ಟಣದ ವೈಟಿಎಸ್ಎಸ್ ಸಭಾಭವನದಲ್ಲಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಕೃಷಿ ಜಯಂತಿ ಅಂಗವಾಗಿ ತಾಲೂಕು ಮಟ್ಟದ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕತೆ ಅಳವಡಿಕೆಯಿಂದ ಕೃಷಿಯಲ್ಲಿ ಅತ್ಯಂತ ಲಾಭಗಳಿಸಬಹುದಾಗಿದ್ದು, ಕೃಷಿ ಕಾಯಕದಿಂದ ಪ್ರತಿಯೊಬ್ಬರ ರೋಗ-ರುಜಿನಗಳು ದೂರವಾಗುತ್ತವೆ. ಇಂತಹ ಸತ್ಯದ ಆಧಾರದಿಂದಲೇ 'ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸು' ಎಂದು ಸರ್ವಜ್ಞ ನುಡಿದಿದ್ದು. ಈ ಸತ್ಯವನ್ನು ನಮ್ಮ ಮಕ್ಕಳಿಗೆ ವಿದ್ಯೆಯ ಜೊತೆ ಜೊತೆಗೆ ಮೂಡಿಸುತ್ತ, ಸಂಸ್ಕಾರದೊಂದಿಗೆ ನೈಜತೆಯ ದರ್ಶನ ಮಾಡಿಸುವ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರದ್ದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವೈಟಿಎಸ್ಎಸ್ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಪರಂಪರಾಗತ ಕೃಷಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ಇಂದಿನ ಅನಿವಾರ್ಯವಾಗಿದೆ. ಕೃಷಿಕರಿಗೆ ಹೆಣ್ಣು ದೊರಕದ ಇಂದಿನ ದಿನಮಾನದಲ್ಲಿ ಕೃಷಿಯ ಕುರಿತು ಮತ್ತೆ ಪ್ರತಿಯೊಬ್ಬರಿಗೂ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ಆಯೋಜಿತಗೊಳ್ಳಬೇಕಾಗಿದೆ ಎಂದರು.
ಕೃಷಿ ಪ್ರತಿಷ್ಠಾನದ ಸದಸ್ಯ ಶ್ರೀಪಾದ ಹೆಗಡೆ ಹೊಸ್ತೋಟ, ಕೃಷಿ ಪ್ರತಿಷ್ಠಾನದ ಸ್ಪರ್ಧಾ ವಿಭಾಗದ ಸಂಚಾಲಕ ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಪ್ರತಿನಿಧಿ ಪ್ರಭಾಕರ ಭಟ್ಟ, ವೈಟಿಎಸ್ಎಸ್ ಉಪ ಪ್ರಾಂಶುಪಾಲೆ ಸಾವಿತ್ರಿ ಕುಲಕರ್ಣಿ ಇದ್ದರು. ವೈಟಿಎಸ್ಎಸ್ ವಿದ್ಯಾರ್ಥಿನಿಯರಾದ ಮಾಧವಿ, ಸ್ವಾತಿ ಪ್ರಾರ್ಥಿಸಿದರು. ಕೃಷಿ ಪ್ರತಿಷ್ಠಾನದ ಸದಸ್ಯ ಕುಮಾರ ಜೋಶಿ ಸೋಂದಾ ಸ್ವಾಗತಿಸಿದರು. ಶಿಕ್ಷಕ ವಿನೋದ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವಿ.ಟಿ. ಹೆಗಡೆ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಹೂಡ್ಲಮನೆ ಶಾಲಾ ಶಿಕ್ಷಕ ವಿ.ಟಿ. ಹೆಗಡೆ, ನೆಲೆಮಾಂವ ಶಿಕ್ಷಕ ಡಿ.ಟಿ. ಹೆಗಡೆ ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು. ತಾಲೂಕಿನ ನಂದೊಳ್ಳಿ, ವೈಟಿಎಸ್ಎಸ್, ವಿಶ್ವದರ್ಶನ, ಹಂಸನಗದ್ದೆ, ಬಿಸಗೋಡ, ಹಿತ್ಲಳ್ಳಿ, ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಕಿರವತ್ತಿ, ಗುಳ್ಳಾಪುರಗಳ 9 ಪ್ರೌಢಶಾಲೆಗಳ (ತಲಾ ಎರಡು) ಒಟ್ಟು 18 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಪಟ್ಟಣದ ವೈಟಿಎಸ್ಎಸ್ನ ಎಚ್.ಎಂ. ಶಶಾಂಕ ಹಾಗೂ ತೇಜಸ್ ಭಟ್ಟ ಪ್ರಥಮ, ಬಿಸಗೋಡ ಪ್ರೌಢಶಾಲೆಯ ಬಿ.ಸಿ. ಸಚಿನ್ ಹಾಗೂ ಆದಿತ್ಯ ಭಟ್ಟ ದ್ವಿತೀಯ, ಹಂಸನಗದ್ದೆ ಪ್ರೌಢಶಾಲೆಯ ಪ್ರಸಾದ ಭಟ್ಟ ಹಾಗೂ ಶ್ರೀಧರ ಗಾಂವ್ಕರ್ ತೃತೀಯ ಸ್ಥಾನ ಗಳಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಕ್ಷೇತ್ರಶಿಕ್ಷಣಾಧಿಕಾರಿ ಎನ್. ಜಿ. ನಾಯಕ ವಿಜೇತರಿಗೆ ಬಹುಮಾನ ವಿತರಿಸಿದರು.
ಬಹುಮಾನಿತರ ಪರವಾಗಿ ಬಿ.ಸಿ. ಸಚಿನ್, ತೇಜಸ್ ಭಟ್ಟ, ಎಚ್.ಎಂ. ಶಶಾಂಕ ಅನಿಸಿಕೆ ವ್ಯಕ್ತಪಡಿಸಿದರು. ಬಿ.ಟಿ. ಹೆಗಡೆ ಆಭಾರ ಮನ್ನಿಸಿದರು. ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.