ಶಿವಮೊಗ್ಗ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮತದಾನ ದಿನವಾದ ಏಪ್ರಿಲ್ 18 ಮತ್ತು 23ರಂದು ನೀವು ಶಿವಮೊಗ್ಗಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಅಲ್ಲಿ ಉಳಿದುಕೊಳ್ಳಲು ಹೊಟೇಲ್ ರೂಂ ಅಥವಾ ಹೋಂ ಸ್ಟೇ, ರೆಸಾರ್ಟ್ ಸಿಗುವ ಸಾಧ್ಯತೆ ಕಡಿಮೆ.
ರಾಜ್ಯದಲ್ಲಿನ ಮತದಾನ ದಿನಾಂಕದಂದು ಇಲ್ಲಿನ ಹೊಟೇಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಚುನಾವಣೆಯ ಮತದಾನದ ದಿನಗಳಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಸಾಲು ಸಾಲು ರಜೆ ಸಿಗುವಾಗ ಜನರು ಶಿವಮೊಗ್ಗಕ್ಕೆ ರಜೆಗೆ ಪ್ರವಾಸ ಹೋಗುವ ಸಾಧ್ಯತೆ ಹೆಚ್ಚಿದೆ. ಚುನಾವಣೆಯ ದಿನ ಪ್ರವಾಸಿಗರು ರಜೆ ಎಂದು ಭಾವಿಸಿ ಬಂದರೆ ಮತದಾನದ ಶೇಕಡಾವಾರು ಕಡಿಮೆಯಾಗುತ್ತದೆ. ಹೀಗಾಗಿ ಹೊಟೇಲ್, ರೆಸಾರ್ಟ್ ಮತ್ತು ಹೋಂ ಸ್ಟೇ ಗಳು ಬುಕ್ಕಿಂಗ್ ಮಾಡಿಕೊಳ್ಳದಂತೆ ಆದೇಶ ನೀಡಿದ್ದೇವೆ .ಜನರ ಗುರುತು ಚೀಟಿ ನೋಡಿಕೊಂಡು ಅವರು ಯಾವ ಕ್ಷೇತ್ರದಲ್ಲಿ ಬರುತ್ತಾರೆ ಎಂದು ಪರೀಕ್ಷಿಸಿ ಆ ದಿನಗಳಂದು ಮತದಾನವಿದ್ದರೆ ಬುಕ್ಕಿಂಗ್ ಮಾಡದಂತೆ ಸೂಚಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ ಎ ದಯಾನಂದ್ ಹೇಳಿದರು.