ಬೆಂಗಳೂರು: ದಿವ್ಯಾಂಗ ಮತದಾರರಿಗೆ ಮತದಾನಕ್ಕೆ ಅನುವು ಮಾಡಿಕೊಡುವ ಸಲುವಾಗಿ ಮೂರು ಕ್ಷೇತ್ರಗಳ 1,651 ಮತಗಟ್ಟೆ ವಲಯಗಳಿಗೆ ಒಂದು ಗಾಲಿ ಕುರ್ಚಿಗಳನ್ನು ಒದಗಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್,
ಮತದಾನಕ್ಕೆ ಮುನ್ನ 1950 ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಂಡವರಿಗೆ ಚುನಾವಣಾ ಆಯೋಗ ಒಂದು ಕೂಪನ್ ನೀಡಲಿದೆ. ಅದರಲ್ಲಿನ ಸಂಖ್ಯೆಯ ನೆರವಿನಿಂದ ದಿವ್ಯಾಂಗರು ಆಯೋಗ ಒದಗಿಸುವ ಉಚಿತ ಸಾರಿಗೆ ಸೇವೆಯನ್ನು ಪಡೆಯಬಹುದು. ಜೊತೆಗೆ, ಓಲಾ ಸಂಸ್ಥೆ ಕೂಡ ತಮ್ಮ ಸಿಎಸ್ಆರ್ ಯೋಜನೆ ಮೂಲಕ ದಿವ್ಯಾಂಗರನ್ನು ಉಚಿತವಾಗಿ ಮತಗಟ್ಟೆಗೆ ಕರೆತರುವ ಹಾಗೂ ಮರಳಿ ಕರೆದೊಯ್ಯುವ ಸೇವೆ ಒದಗಿಸುವ ಪ್ರಸ್ತಾವನೆ ಸಲ್ಲಿಸಿದೆ. ಅದು ಪರಿಶೀಲನೆಯಲ್ಲಿದೆ ಎಂದರು.
ಮೂರು ಕ್ಷೇತ್ರಗಳಲ್ಲಿ ಮತದಾನದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಮತಪಟ್ಟಿಯಲ್ಲಿ 90.84 ಮತದಾರರು ತಮ್ಮ ಹಕ್ಕು ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಏ 25ರಿಂದ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಮತದಾರರ ಕೈಪಿಡಿ ಹಾಗೂ ಮತದಾರರ ಸ್ಲಿಪ್ ವಿತರಣೆಯಲ್ಲಿ ತೊಡಗಲಿದ್ದಾರೆ. ಏ.11ರೊಳಗೆ ವಿತರಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಒಟ್ಟು 8,500 ಮತಗಟ್ಟೆಗಳಿದ್ದು, ಅದರ ನಿರ್ವಹಣೆಗೆ ಒಟ್ಟು 45,000 ಮತಗಟ್ಟೆಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ 27 ಸಾವಿರ ಹಿರಿಯ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಉಳಿದವರಿಗೆ ಎರಡನೇ ಹಂತದ ತರಬೇತಿ ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೂರು ಕ್ಷೇತ್ರಗಳಲ್ಲಿ ಒಟ್ಟು 1,600 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಲ್ಲಿ 1,204 ಮೈಕ್ರೋ ಪರಿವೀಕ್ಷಕರು ಹಾಗೂ 400 ವೆಬ್ ಕಾಸ್ಟಿಂಗ್ ಕ್ಯಾಮೆರಾ ಅಳವಡಿಸಲಾಗಿದೆ. ಪರಿವೀಕ್ಷಕರಲ್ಲಿ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ಯೋಗಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರಗಳ ಬದಲಾವಣೆ
ಈ ಬಾರಿ ಮತ ಎಣಿಕೆ ಕೇಂದ್ರಗಳನ್ನು ಬದಲಾಯಿಸಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಮತಗಳನ್ನು ಮಲ್ಯ ಆಸ್ಪತ್ರೆ ರಸ್ತೆಯ ಸೈಂಟ್ ಜೋಸೆಫ್ ಪ್ರೌಢ ಶಾಲೆ, ಕೇಂದ್ರ ಕ್ಷೇತ್ರದ ಮತಗಳನ್ನು ಮೌಂಟ್ ಕಾರ್ಮೆಲ್ ಕಾಲೇಜು ಹಾಗೂ ದಕ್ಷಿಣ ಕ್ಷೇತ್ರದ ಮತಗಳ ಎಣಿಕೆ ಜಯನಗರದ ಎಸ್ಎಸ್ಎಂಆರ್ ವಿ ಕಾಲೇಜಿನಲ್ಲಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.