ಸ್ವಾರಸ್ಯ

ಚುನಾವಣೆ ಹಿನ್ನೆಲೆ: ಹಿರಿಸಾವೆ ಬಳಿ ಮುಖ್ಯಮಂತ್ರಿ ಕಾರು ತಡೆದು ತಪಾಸಣೆ

Srinivas Rao BV
ಹಿರಿಸಾವೆ: ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಕಣ್ಗಾವಲು ತಂಡ, ಹಾಸನ ಜಿಲ್ಲೆಯ ಹಿರಿಸಾವೆ ಬಳಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಕಾರು ತಡೆದು ತಪಾಸಣೆಗೆ ಒಳಪಡಿಸಿದ ಪ್ರಸಂಗ ಇಂದು ನಡೆದಿದೆ. 
ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಕುಮಾರ ಸ್ವಾಮಿ ಅವರ ಕಾರನ್ನು ಹಿರಿಸಾವೆ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆಗೆ ಒಳಪಡಿಸಿದರು. 
ಇದಕ್ಕೆ ಕಿಂಚಿತ್ತೂ ಬೇಸರಿಸಿಕೊಳ್ಳದ ಕುಮಾರ ಸ್ವಾಮಿ, ತಪಾಸಣೆಗೆ ಸಂಪೂರ್ಣ ಸಹಕಾರ ನೀಡಿದರು. ಪ್ರತಿ ವಾಹನವನ್ನು ಸಮಗ್ರವಾಗಿ ತಪಾಸಣೆಗೆ ಒಳಪಡಿಸಬೇಕು ಎಂಬ ಆದೇಶದ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.
ಬಳಿಕ ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣ ಮನೆಗೆ ತೆರಳಿ ಅಲ್ಲಿ ಉಪಹಾರ ಸೇವಿಸಿ ನಂತರ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. 
ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಕುಮಾರ ಸ್ವಾಮಿ, ಚುನಾವಣೆಯಲ್ಲಿ ತಾವು ಹೆಚ್ಚು ಸಕ್ರಿಯವಾಗಿ ತೊಡಗಿಕೊಳ್ಳಬಾರದು ಎಂಬ ಉದ್ದೇಶದಿಂದ  ಬಿಜೆಪಿಯ ಕೇಂದ್ರ ನಾಯಕರು ನಮಗೆ ಹೆಲಿಕಾಪ್ಟರ್ ಕೂಡ ಸಿಗದಂತೆ ಮಾಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. 
ಐಟಿ ಅಧಿಕಾರಿಗಳು ಏಕಪಕ್ಷೀಯವಾಗಿ ಐಟಿ ದಾಳಿ ಮಾಡುತ್ತಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ ಗುತ್ತಿಗೆದಾರರು ಇಲ್ಲ. ರಾಜ್ಯದ ಎಲ್ಲೆಡೆಯೂ ಇದ್ದಾರೆ. ಆದರೆ ನಿರ್ದಿಷ್ಟವಾಗಿ ಹಾಸನ, ಮಂಡ್ಯದವರನ್ನೇ ಯಾಕೆ ಗುರಿ ಮಾಡಲಾಗುತ್ತಿದೆ. ಇವೆಲ್ಲಾ ರಾಜಕೀಯ ಪ್ರೇರಿತ ದಾಳಿಗಳು ಎಂದರು. 
SCROLL FOR NEXT