ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮೃತಿ ಇರಾನಿ
ಅಮೇಥಿ: ನಟಿ ಜಯಪ್ರದ ವಿರುದ್ಧ ಎಸ್ ಪಿ ಮುಖಂಡ ಅಜಂಖಾನ್ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದು, ಮಹಿಳೆ ಕುರಿತ ಅವಹೇಳನಕಾರಿ ಹೇಳಿಕೆ ಹೊರತಾಗಿಯೂ ಎಸ್ ಪಿ ಮುಖಂಡರ ಮೌನ ಖಂಡನೀಯ ಎಂದು ಹೇಳಿದ್ದಾರೆ.
ಅಮೇಥಿಯಲ್ಲಿ ಮಾತನಾಡಿದ ಅವರು, ಮಹಿಳೆ ಕುರಿತಂತೆ ನಾಯಕರು ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದರೂ ಆ ಪಕ್ಷದ ಪ್ರಮುಖ ನಾಯಕರು ಮೌನವಾಗಿದ್ದಾರೆ. ಇದು ಆ ಪಕ್ಷ ಮಹಿಳೆಯರ ಕುರಿತ ಅವರ ಭಾವನೆಯನ್ನು ತೋರಿಸುತ್ತದೆ. ರಾಜಕೀಯದಲ್ಲಿ ಮಹಿಳೆಯರಿಗೆ ಅವರದ್ದೇ ಆದ ಗೌರವವಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಚ್ಯುತಿ ಬರಬಾರದು. ಈ ಬಗ್ಗೆ ಮುಲಾಯಂ ಸಿಂಗ್ ಯಾದವ್ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.
ನಿನ್ನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಸಮಾಜವಾದಿ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದ ವೇದಿಕೆಯಲ್ಲೇ ಅಜಂಖಾನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಜಯಪ್ರದಾ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು. ಇದೇ ರಾಂಪುರದಿಂದ ಆಕೆಗೆ ಟಿಕೆಟ್ ಕೊಡಿಸಿದ್ದೆ. ಆಕೆಯ ಬಾಡಿಗಾರ್ಡ್ ನಂತೆ ಆಕೆಯನ್ನು ಯಾರೂ ಕೂಡ ಸ್ಪರ್ಶಿಸದಂತೆ ನೋಡಿಕೊಂಡೆ. ಆದರೆ ಆಕೆಯ ನಿಜವಾದ ಮುಖವನ್ನು ತಿಳಿಯಲು ನನಗೆ 17 ವರ್ಷಗಳೇ ಬೇಕಾಯಿತು. 17 ದಿನಗಳ ಹಿಂದಷ್ಟೇ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ತಿಳಿಯಿತು ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos