ಕೊಚ್ಚಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಹೌದು.. ಈ ಬಾರಿ ಉತ್ತರ ಪ್ರದೇಶದ ತಮ್ಮ ಸ್ವಕ್ಷೇತ್ರ ಅಮೇಥಿ ಮಾತ್ರವಲ್ಲದೇ ಕೇರಳದ ವಯನಾಡ್ ನಿಂದಲೂ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ, ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೇರಳದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಕೇರಳದ ತಿರುನೇಲಿ ದೇಗುಲಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ವಿವಿಧ ಬಗೆಯ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು.
ಇನ್ನು ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸಾಥ್ ನೀಡಿದರು. ಈ ವೇಳೆ ರಾಹುಲ್ ಗಾಂಧಿ ದೇಗುಲ ಅರ್ಚಕರ ಸೂಚನೆಯಂತೆ ಬಿಳಿ ಪಂಚೆ ಮತ್ತು ಧೋತಿ ಧರಿಸಿದ್ದ ರಾಹುಲ್ ಗಾಂಧಿ ತಮ್ಮ ಪೂರ್ವಜರಿಗೆ, ತಂದೆ ರಾಜೀವ್ ಗಾಂಧಿ ಅವರಿಗೆ ಮತ್ತು ಅಜ್ಜಿ ಇಂದಿರಾಗಾಂಧಿ ಅವರಿಗೆ ಪೂಜೆ ಸಲ್ಲಿಸಿದರು. ಅಂತೆಯೇ ಪುಲ್ವಾಮ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರಿಗೂ ರಾಹುಲ್ ಗಾಂಧಿ ಪೂಜೆ ಸಲ್ಲಿಕೆ ಮಾಡಿದ್ದು ವಿಶೇಷವಾಗಿತ್ತು.
ಇನ್ನು ರಾಹುಲ್ ಗಾಂಧಿ ಕಳೆದ ಬಾರಿ ಕೇರಳಕ್ಕೆ ಭೇಟಿ ನೀಡಿದ್ದಾಗಲೇ ಈ ಪೂಜೆಗಳನ್ನು ಸಲ್ಲಿಸಬೇಕಾಗಿತ್ತಂತೆ. ಆದರೆ ಭದ್ರತ ದೃಷ್ಟಿಯಿಂದ ಅವರ ಭದ್ರತಾ ಅಧಿಕಾರಿಗಳು ಕಳೆದ ಬಾರಿ ಇದಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಇಂದು ಪೂರ್ವ ಸಿದ್ಧತೆಯೊಂದಿಗೆ ರಾಹುಲ್ ಗಾಂಧಿ ಸಕಲ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಸಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.